ಕುಂದಾಪುರ: ಮುಂಬೈಯಿಂದ ಮಂಗಳೂರಿನತ್ತ ಸರಕು ಸಾಗಿಸುತ್ತಿದ್ದ ಲಾರಿ ಚಾಲಕ ಮತ್ತು ಜೊತೆಗಿದ್ದ ಚಾಲಕನ ಸಹೋದರನ ಮೇಲೆ ಕೋಟ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ
ಕುಂದಾಪುರ ವಂಡ್ಸೆ ನಿವಾಸಿಗಳಾದ ಶಿವರಾಜ್ ಗಾಣಿಗ (27) ಮತ್ತು ನಾಗರಾಜ್(33) ಸಹೋದರರೇ ಹಲ್ಲೆಗೊಳಗಾದವರು. ಇವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಗಿದ್ದಾದರೂ ಏನು?
ತಮ್ಮದೇ ಆದ ಸ್ವಂತ ಲಾರಿಯಲ್ಲಿ ಸರಕು ಹೇರಿಕೊಂಡು ಮುಂಬೈಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ಗುರುವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಹೆಮ್ಮಾಡಿ ಎಂಬಲ್ಲಿ ಲಾರಿ ನಿಲ್ಲಿಸಿ ಅಲ್ಲಿಂದ ವಂಡ್ಸೆಯ ತಮ್ಮ ಮನೆಗೆ ತೆರಳಿ ಊಟ ಮುಗಿಸಿ ರಾತ್ರಿ ಹನ್ನೊಂದು ಗಂಟೆಗೆ ಆಗಮಿಸಿ ಲಾರಿಯನ್ನೇರಿ ಮಂಗಳೂರಿನತ್ತ ಪ್ರಯಾಣಿಸಿದ್ದರು. ಹೀಗೆ ಸಾಗುತ್ತಿದ್ದ ವೇಳೆ ಲಾರಿಯನ್ನು ತೆಕ್ಕಟ್ಟೆ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ತಂಡ ನಿಲ್ಲಿಸಿದೆ ಎನ್ನಲಾಗಿದೆ. ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ಇನ್ನಿಬ್ಬರಿದ್ದ ಆ ತಂದದಲ್ಲಿದ್ದ ಸಿಬ್ಬಂದಿ ಲಾರಿ ಚಾಲಕ ನಾಗರಾಜ್ ಬಳಿ ಲಾರಿಯಿಂದ ಇಳಿದು ಬಂದು ದಾಖಲೆ ತೋರಿಸುವಂತೆ ತಿಳಿಸಿದ್ದರು. ನಾಗರಾಜ್ ದಾಖಲೆಗಳನ್ನು ತೋರಿಸಲು ಕೊಂಚ ವಿಳಂಬವಾಗಿದ್ದೇ ತಡ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ಇಬ್ಬರಿಗೆ ನಿಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಇಬ್ಬರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಯಾವುದೇ ಪ್ರಕರಣ ದಾಖಲಿಸಕೊಳ್ಳದೆ ಇಬ್ಬರನ್ನೂ ಬೆಳಿಗ್ಗೆಯವರೆಗೆ ಠಾಣೆಯಲ್ಲಿಸಿಕೊಂಡಿದ್ದಲ್ಲದೇ ಕೈಕಾಲು ಬಾಯಿ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಪೊಲೀಸರು ನಡೆಸಿದ್ದಾರೆನ್ನಲಾದ ಹಲ್ಲೆಯಿಂದಾಗಿ ನಾಗರಾಜ್ ಮತ್ತು ಶಿವರಾಜ್ರ ಕೈಕಾಲುಗಳು, ಬೆನ್ನು ಮತ್ತು ಭುಜಕ್ಕೆ ತೀವ್ರ ಗಾಯಗಳಾಗಿವೆ. ಸದ್ಯ ಇವರಿಬರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ವಿಚಾರ ತಿಳಿಯುತ್ತಿದ್ದಂತೆಯೇ ಗಾಣಿಗ ಸಮುದಾಯದ ಸಂಘಟನೆಗಳು ಮತ್ತು ಲಾರಿ ಮಾಲಕ ಮತ್ತು ಚಾಲಕರ ಸಂಘ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಯುವಕರ ಮೇಲೆ ದೌರ್ಜನ್ಯವೆಸಗಿದ ಕೋಟ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಸೇವೆಯಲ್ಲಿದ್ದ ಅಧಿಕಾರಿ ಸೇರಿದಂತೆ ಆರೇಳು ಮಂದಿ ಪೊಲೀಸ್ ಸಿಬ್ಬಂದಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ್ ಆಗ್ರಹಿಸಿದ್ದಾರೆ.
ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿದ್ದು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಈಗಾಗಲೇ ಉಡುಪಿ ಎಸ್ಪಿ ಅವರಿಗೂ ಮಾಹಿತಿಯನ್ನು ನೀಡಲಾಗಿದೆ.
ಪೊಲೀಸರು ಮನುಷ್ಯರಲ್ಲವೇ?
ಕಾಯುವ ಜನರೇ ಕಾನೂನು ಕೈಗೆ ತೆಗೆದುಕೊಂಡರೇ ನಮ್ಮ ಗತಿಯೇನು? ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಸ್ವಂತ ದುಡಿಮೆ ಮಾಡಲು ಕರಿಮಣಿ ಸೇರಿದಂತೆ ಚಿನ್ನಾಭರಣವಿಟ್ಟು ಸಾಲ ಪಡೆದು ಲಾರಿ ಖರೀದಿ ಮಾಡಿ ಬದುಕುವ ದಾರಿ ಕಂಡುಕೊಂಡ ಮಕ್ಕಳಿಗೆ ಪೊಲೀಸರು ಮಾಡಿದ ಅನ್ಯಾಯ ತಪ್ಪು. ನಮಗೆ ನ್ಯಾಯ ಕೊಡಿಸಿ, ನಮ್ಮಂತ ಬಡವರಿಗೆ ಬದುಕಲು ಬಿಡಿ ಎಂದು ಕಣ್ಣೀರಿಡುತ್ತಾ ನಾಗರಾಜ್ ಸಹೋದರರ ತಾಯಿ ಮಾಧ್ಯಮದ ಮುಂದೆ ನೋವನ್ನು ತೋಡಿಕೊಂಡರು.
ಇದೇನಾ ಜನಸ್ನೇಹಿ ಪೊಲೀಸ್ ವ್ಯವಸ್ಥೆ?
ದಕ್ಷ ಅಧಿಕಾರಿ ಎಂದೇ ಖ್ಯಾತಿ ಪಡೆದ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರು ‘ಜನಸ್ನೇಹಿ’ ಪೊಲೀಸ್ ವ್ಯವಸ್ಥೆ ಆಗಬೇಕೆಂದು ಹಂಬಲಪಟ್ಟವರು. ಆದರೇ ಯಾವುದೇ ಕೇಸು ದಾಖಲು ಮಾಡದೇ ಅಕ್ರಮ ಬಂಧನದಲ್ಲಿಟ್ಟು ಹಿಗ್ಗಾಮುಗ್ಗಾ ಥಳಿಸುವುದು, ಬಾಯಿಗೆ ಬಂದ ಅವ್ಯಾಚ ಪದ ಬಳಕೆ ಯಾವ ರೀತಿಯಾದ ಜನಸ್ನೇಹಿ ವ್ಯವಸ್ಥೆ ಎನ್ನುವುದು ಸಾರ್ವಜನಿಕರು ಕೇಳುವ ಪ್ರಶ್ನೆಯಾಗಿದೆ.
ಇದೇನು ಹೊಸತಲ್ಲ…!
ಕೋಟ ಪೊಲೀಸ್ ಠಾಣೆ ಮಟ್ಟಿಗೆ ಹೇಳುವುದಾದರೇ ಇದೇನು ಹೊಸತಲ್ಲ. ಇಲ್ಲಿನ ಸಿಬಂದಿಗಳಿಗೂ ಜನರಿಗೂ ಉತ್ತಮ ಸಂಹವನ ಸಂಪರ್ಕ ಕೊರತೆ ಮೊದಲಿನಿಂದಲೂ ಇದೆ. ಠಾಣೆಗೆ ಬರುವವರಿಗೆ (ಅದು ಯಾರೇ ಆಗಿರಲಿ) ದರ್ಪದ ಮಾತಿನ ಸ್ವಾಗತ ಇಲ್ಲಿ ಬಹುತೇಕ ಮಾಮೂಲಿಯಾಗಿದೆ ಎನ್ನುವುದು ಕೆಲವರ ಆರೋಪ. ಅಷ್ಟೇ ಅಲ್ಲದೇ ಇತ್ತೀಚೆಗೆ ಇಲ್ಲಿನ ಕೆಲವು ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆಗಳು ನಡೆದಿತ್ತು.
ನಿಸ್ಪಕ್ಷಪಾತ ತನಿಖೆಯಾಗಲಿ
ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಗುರುವಾರ ರಾತ್ರಿ ಈ ಘಟನೆಗೆ ಸಂಬಂದಪಟ್ಟಂತೆ ನಡೆದ ಎಲ್ಲಾ ವಿಚಾರಗಳು ನಿಸ್ಪಕ್ಷಪಾತ ತನಿಖೆಯಾಗಬೇಕಿದೆ. ನಿಜವಾಗಿಯೂ ಪೊಲೀಸರು ಈ ಅಮಾನುಷ ಕ್ರತ್ಯಕ್ಕೆ ಯಾಕೇ ಮುಂದಾದರೂ? ಯಾಕೇ ಪ್ರಕರಣ ದಾಖಲು ಮಾಡಲಿಲ್ಲ? ಮಾನವೀಯತೆ ಮರೆತರಾ ಪೊಲೀಸರು ಎಂಬುದರೆಲ್ಲದರ ಬಗ್ಗೆ ತನಿಖೆಯಾಗಬೇಕಿದೆ. ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕಿದೆ.
ಈತನ್ಮಧ್ಯೆ ಕರ್ತವ್ಯದಲ್ಲಿದ್ದ ನಮ್ಮ ಮೇಲೆಯೇ ಹಲ್ಲೆ ನಡೆಸಲು ಮುಂದಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪೊಲೀಸರು ಕೂಡ ಆರೋಪಿಸಿ ದೂರು ದಾಖಲು ಮಾಡಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಎಲ್ಲಿ ಹೋಗಿ ನಿಲ್ಲುತ್ತದೋ ಕಾದು ನೋಡಬೇಕಿದೆ.