ಕುಂದಾಪುರ: ಕುಂದಾಪುರ ಹೊಸ ಬಸ್ಸು ನಿಲ್ದಾಣ ಸಮೀಪದಲ್ಲಿರುವ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡದಲ್ಲಿರುವ ವಿದ್ಯುತ್ ನಿರ್ವಹಣೆಯ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಬೆಳಿಗ್ಗೆ ಕಲಾಪ ಅರಂಭವಾಗುವ ಹೊತ್ತಿನಲ್ಲಿ ನ್ಯಾಯಾಲಯ ಸಂಕೀರ್ಣದ ಪಶ್ಚಿಮ ಭಾಗದಲ್ಲಿರುವ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದ್ದಲ್ಲದೇ ಕ್ಷಣ ಮಾತ್ರದಲ್ಲಿಯೇ ದಟ್ಟ ಹೊಗೆ ಆವರಿಸಿದೆ. ಕೂಡಲೇ ನ್ಯಾಯಾಲಯದಲ್ಲಿದ್ದ ವಕೀಲರೊಬ್ಬರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಪರಿಸ್ಥಿತಿ ನಿಬಾಯಿಸಿದ್ದಾರೆ. ಅಷ್ಟರಲ್ಲಾಗಲೇ ವಿದ್ಯುತ್ ಬೋರ್ಡ್, ವಯರುಗಳು, ಮೀಟರ್ ಬೋರ್ಡ್ ಸುಟ್ಟು ಕರಕಲಾಗಿದೆ.
ಅಂದಾಜು ಒಂದೂವರೆ ಲಕ್ಷಕ್ಕೂ ಅಧಿಕ ನಷ್ಟ ಮೌಲ್ಯದ ವಿದ್ಯುತ್ ಪರಿಕರಗಳು ನಷ್ಟವಾಗಿದೆ ಎನ್ನಲಾಗಿದೆ. ಅನಿರೀಕ್ಷಿತ ಘಟನೆಯಿಂದಾಗಿ ಅರ್ಧ ಗಂಟೆಗಳ ಕಾಲ ಕೋರ್ಟ್ ಕಲಾಪ ಮುಂದಕ್ಕೆ ಹೋಗಿತ್ತು. ವಿದ್ಯುತ್ ಪರಿಕರಗಳು ಸುಟ್ಟ ಪರಿಣಾಮ ಸಂಪೂರ್ಣ ನ್ಯಾಯಾಲಯದಲ್ಲಿ ವಿದ್ಯುತ್ ನಿಲುಗಡೆಯಾಗಿದೆ. ಇದರ ರಿಪೇರಿಯಾಗುವರೆಗೂ ವಿದ್ಯುತ್ ಸಂಪರ್ಕ ಇಲ್ಲವೆನ್ನಲಾಗುತ್ತಿದೆ.
ಸ್ಥಳಕ್ಕೆ ಮೆಸ್ಕಾಂ ಸಂಬಂದಪಟ್ಟವರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.