ಮಂಗಳೂರು, ಮೇ 2: ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯ ಸುಬ್ರಹ್ಮಣ್ಯ ಸ್ವಾಮಿ ಮಾಡಿರುವ ಆರೋಪವನ್ನು ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು, ಸುಬ್ರಹ್ಮಣ್ಯ ಸ್ವಾಮಿಯಂತಹ ನೀಚ ವ್ಯಕ್ತಿಯ ಮಾತುಗಳು ನಮಗೆ ಅಗತ್ಯವಿಲ್ಲ. ಅಪಪ್ರಚಾರದ ಮೂಲಕ ಸಂಘ ಪರಿವಾರ ಶಕ್ತಿಗಳು ಅಧಿಕಾರ ಪಡೆಯಲು ಮಾಡುವ ಹುನ್ನಾರಕ್ಕೆ ಸರಿಯಾದ ಉತ್ತರ ನೀಡಬೇಕಾಗಿದೆ. ಯುವಜನತೆಯನ್ನು ಹಾದಿ ತಪ್ಪಿಸುವ ಸಂಘ ಪರಿವಾರದ ವಿರುದ್ದ ಯುವ ಕಾಂಗ್ರೆಸ್ ವತಿಯಿಂದ ನಿರಂತರ ಹೋರಾಟ ನಡೆಯಬೇಕಾಗಿದೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸುಮಾರು 10 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಜವಾಹರ್ ಲಾಲ್ ನೆಹರೂ, ಬಡವರಿಗೆ ನ್ಯಾಯ ದೊರಕಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಇಂದಿರಾ ಗಾಂಧಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ರಾಜೀವ್ ಗಾಂಧಿ ಅವರ ಮೇಲೂ ಸುಳ್ಳು ಆರೋಪ ಮಾಡುವ ಕೆಲಸ ಸಂಘ ಪರಿವಾರದಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಇದೀಗ ಸೋನಿಯಾ ಗಾಂಧಿ ಅವರ ಮೇಲೆ ಆರೋಪ ಮಾಡುವ ಸಂಘ ಪರಿವಾರದ ಅಧಿಕಾರ ಲಾಲಸೆಯನ್ನು ಮೆಟ್ಟಿ ನಿಲ್ಲಬೇಕಾಗಿದೆ. ಪ್ರಜಾಪ್ರಭುತ್ವದ ಮೇಲೆ ವಿಶ್ವಾಸಯುಳ್ಳವರು ಇದನ್ನು ಖಂಡಿಸಬೇಕಾಗಿದೆ ಎಂದು ರೈ ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ,ಮೊಯಿದ್ದೀನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ಮೇಯರ್ ಹರಿನಾಥ್, ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಮಾಜಿ ಮೇಯರ್ ಆಶ್ರಫ್, ಕಾಂಗ್ರೆಸ್ನ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್, ಮನಪಾ ಸದಸ್ಯ ಶಶಿಧರ್ ಹೆಗ್ಡೆ , ಕಾಂಗ್ರೆಸ್ ಮುಖಂಡ ಈಶ್ವರ ಉಳ್ಳಾಲ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.