ಮಂಗಳೂರು, ಎ.29: ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಉಂಟಾಗಿರುವ ಎರಡು ಬಣಗಳ ನಡುವಿನ ಜಟಾಪಟಿಯು ಇಂದು ತಾರಕಕ್ಕೇರಿದ್ದು, ಗುಂಪೊಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ತಂದೆಯ ಖಬರ್ (ಗೋರಿ ) ನ್ನು ಧ್ವಂಸಗೊಳಿಸಿ, ತಾಯಿಯ ಖಬರ್ಗೆ ಹಾನಿಯನ್ನುಂಟು ಮಾಡುವ ಮೂಲಕ ಅನಾಗರಿಕತೆಯನ್ನು ಪ್ರದರ್ಶಿಸಿದ್ದಾರೆ.
ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ಪ್ರವೇಶ ಮಾಡಿದೆ ಎಂದು ಆರೋಪಿಸಿರುವ ಒಂದು ಬಣವು ಇಂದು ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ಸಚಿವ ಖಾದರ್ ಅವರ ತಂದೆಯ ಖಬರ್ನ ಮೇಲಿನ ಟೈಲ್ಸ್ಗಳು ಹಾಗೂ ನಾಮಫಲಕವನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಅಲ್ಲೇ ಹತ್ತಿರದಲ್ಲಿದ್ದ ತಾಯಿಯ ಖಬರ್ ಮೇಲಿನ ಟೈಲ್ಸ್ಗೆ ಹಾನಿಗೊಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳೆದ ತಿಂಗಳಿಂದೀಚೆಗೆ ಮಸೀದಿ ಮತ್ತು ದರ್ಗಾ ಸಮಿತಿಯ ಅಧ್ಯಕ್ಷರ ಆಯ್ಕೆ ವಿಷಯಕ್ಕೆ ಸಂಬಂಧಿಸಿ ಎರಡೂ ಬಣಗಳು ಅಂತಿಮ ನಿರ್ಧಾರ ಕೈಗೊಳ್ಳದಿದ್ದರಿಂದ ಅಧ್ಯಕ್ಷರ ಆಯ್ಕೆ ವಿಷಯ ತಾರಕ್ಕಕ್ಕೇರಿತ್ತು. ಈ ಎರಡೂ ಬಣಗಳ ಅಸಮಾಧಾನ ನಿನ್ನೆ ಭುಗಿಲೆದ್ದು ಪರಸ್ಪರ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ವಿಷಯ ತಾರಕ್ಕೇರುವುದನ್ನು ಅರಿತ ಪೊಲೀಸ್ ಅಧಿಕಾರಿಗಳು ನಿನ್ನೆ ರಾತ್ರಿ ಅಧ್ಯಕ್ಷರ ಕಚೇರಿಗೆ ಬೀಗ ಜಡಿದಿದ್ದರು.
ವರದಿ ಕೃಪೆ : ವಾಭಾ