ಮಂಗಳೂರು,ಎ.29 : ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ನೀಡುವುದಾಗಿ ಹೇಳಿಕೊಂಡ ವಂಚಕರ ಜಾಲವೊಂದು ಸುರತ್ಕಲ್ನ ವ್ಯಕ್ತಿಯೊಬ್ಬರಿಗೆ ರೂ.1,25,570 ರೂ ವಂಚಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಇದೀಗ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುರತ್ಕಲ್ ನ ಕಟ್ಲದ ನಿವಾಸಿ ರಮೇಶ್ ಮೆಂಡನ್ ಎಂಬವರಿಗೆ ಎ.16ರಂದು ಪೋನ್ ಮಾಡಿದ ಥೊಮಸ್ ಎಲ್ ವಜಾದ ಎಂಬ ವ್ಯಕ್ತಿ ತಾನು ಭಾರತದಲ್ಲಿ ಅಮೇರಿಕಾದ ರಾಯಭಾರಿ ಹಾಗೂ ಮಿ. ಡೆವಿಡ್ ವೈಟ್ ಹೆಚ್ ಆರ್ ಮೆನೆಜರ್ ಎಂದು ಪರಿಚಯಿಸಿಕೊಂಡಿದ್ದರು. ರಮೇಶ್ ಮೆಂಡನ್ ಯು.ಎಸ್.ಎ ಯಲ್ಲಿ ಆಯಿಲ್ ಆ್ಯಂಡ್ ಗ್ಯಾಸ್ ಕಂಪೆನಿಯಲ್ಲಿ ಉದ್ಯೋಗ ಇದೆ ಎಂದು ಹೇಳಿ ವೀಸಾ ರಿಜಿಸ್ಟ್ರೇಷನ್ಗೆ ರೂ.43720 ನೀಡುವಂತೆ ಸೂಚಿಸಿದ್ದನು. ಅದರಂತೆ ರಮೆಶ್ ಮೆಂಡನ್ ಅವರು ಸುರತ್ಕಲ್ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಹಣವನ್ನು ಥೋಮಸ್ ಎಲ್ ವಜಾದ ಸೂಚಿಸಿದ ಅಕೌಂಟ್ಗೆ ಹಾಕಿದ್ದರು.
ಆದರೆ ಎ.23 ಕ್ಕೆ ಮತ್ತೆ ಕರೆ ಮಾಡಿದ ಅ ವ್ಯಕ್ತಿ ಎಂಪ್ಲೋಯ್ಮೆಂಟ್ ಅಥೋರೈಸೇಸನ್ ಅಪ್ರೂವಲ್ ಫೀಸ್ ಆಗಿ ರೂ. 81850 ನೀಡುವಂತೆ ಸೂಚಿಸಿದ್ದನು. ಅದರಂತೆ ರಮೇಶ್ ಮೆಂಡನ್ ಹಣವನ್ನು ಕಾರ್ಪೋರೇಶನ್ ಬ್ಯಾಂಕಿನ ಸುರತ್ಕಲ್ ಶಾಖೆಯಲ್ಲಿ ಪಾವತಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ ಮತ್ತೆ ಮೂರನೇ ಬಾರಿ ಎ.25 ರಂದು ಪೋನ್ ಮಾಡಿದ ಥೋಮಸ್ ಎಲ್ ವಜಾದ ರೂ. 1,40,500 ಪಾವತಿಸುವಂತೆ ಸೂಚಿಸಿದ್ದಾನೆ. ಇದರಿಂದ ಅನುಮಾನಗೊಂಡ ರಮೇಶ್ ಮೆಂಡನ್ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುರತ್ಕಲ್ ಠಾಣಾ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.