ಕನ್ನಡ ವಾರ್ತೆಗಳು

ಸಂದೀಪ್ ಶೆಟ್ಟಿ ಮರ್ಡರ್ ಕೇಸ್ : ಮೂವರು ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ – ಎಂಟು ಮಂದಿ ಖುಲಾಸೆ

Pinterest LinkedIn Tumblr

Choni_Gund_Act_1

ಕೇಶವ ಯಾನೆ ಚೋನಿ ( ಕಡತ ಚಿತ್ರ )

ಮಂಗಳೂರು, ಎ.23: ಸೋಮೆಶ್ವರದ ರೈಲ್ವೆ ನಿಲ್ದಾಣದ ಬಳಿಯ ಸಂದೀಪ್ ಶೆಟ್ಟಿ (26) ಎಂಬವರನ್ನು ಮನೆಯಲ್ಲಿಯೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳಿಗೆ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಹೆಚ್.ಎಸ್.ಪುಷ್ಪಾಂಜಲಿ ಅವರು ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಆರೋಪಿಗಳಾದ ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿಯ ಜಯಪೂಜಾರಿ ಎಂಬವರ ಮಗ ಕೇಶವ ಯಾನೆ ಚೋನಿ ( 25), ಬಂಟ್ವಾಳ ಮೊಂಟೆಪದವಿನ ದಯಾನಂದ ಪೂಜಾರಿ ಎಂಬವರ ಮಗ ಪ್ರೀತೇಶ್ ಯಾನೆ ಪ್ರೀತು(21), ತಲಪಾಡಿ ಕಿನ್ಯದ ಪ್ರಭಾಕರ್ ನಾಯಕ್ ಎಂಬವರ ಮಗ ಅವಿನಾಶ್ ಬಜಿಲಕೇರಿ(30) ಎಂಬವರಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ಪ್ರಕರಣದಲ್ಲಿ ಬಂಧಿತರಾಗಿದ್ದ ತೊಕ್ಕೊಟ್ಟುವಿನ ನಿಶಾಂತ್ ಯಾನೆ ನಿಶು, ಕೊಲ್ಯ ಸೋಮೇಶ್ವರದ ಭೂಷಣ್, ಸೋಮೇಶ್ವರ ರೈಲ್ವೆ ನಿಲ್ದಾಣ ಬಳಿಯ ಸಂದೇಶ್ ಯಾನೆ ಸಂದು, ಮಡ್ಯಾರ್ ಕೋಟೆಕಾರ್‌ನ ಸೂರಜ್, ಕೊಲ್ಯ ದ ಚೇತನ್ ಯಾನೆ ಚೇತು, ಮುನ್ನೂರು ಗ್ರಾಮದ ರಾಜೇಶ್, ಹೊಸಬೆಟ್ಟು ಕುಳಾಯಿಯ ಗುರುಪ್ರಸಾದ್ ಯಾನೆ ಗುರು , ಕೋಟೆಕಾರ್‌ನ ಚಂದ್ರಹಾಸ ನಾರಾಯಣ ಪೂಜಾರಿ ಅವರನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಷೆಗೊಳಿಸಲಾಗಿದೆ.

Sandip_Murder_ullala

ಹತ್ಯೆಯಾದ ಸಂದೀಪ್ ಶೆಟ್ಟಿ ಮತ್ತು ಮೊದಲನೆ ಆರೋಪಿ ಕೇಶವ ಯಾನೆ ಚೋನಿ ನಡುವೆ ಭೂವ್ಯವಹಾರವಿತ್ತು. ಭೂವ್ಯವಹಾರವೆ ಕೊಲೆಗೆ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ.

ಮೂವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದರಿಂದ 302 ಸೆಕ್ಷನ್ ನಡಿಯಲ್ಲಿ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ಹತ್ತು ಸಾವಿರ ದಂಡವನ್ನು ವಿಧಿಸಲಾಗಿದೆ. 143 ನೇ ಸೆಕ್ಷನ್‌ಅಡಿಯಲ್ಲಿ 6 ತಿಂಗಳು ಜೈಲು ಶಿಕ್ಷೆ ಮತ್ತು 500 ರೂ ದಂಡ. ದಂಡ ತೆರಲು ತಪ್ಪಿದರೆ ಹೆಚ್ಚುವರಿ 5 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ, 147 ನೇ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ,1500 ದಂಡ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ, 148 ಸೆಕ್ಷನ್ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ , 2000 ರೂ. ದಂಡ.ದಂಡ ತೆರಲು ತಪ್ಪಿದಲ್ಲಿ 2 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಸೆಕ್ಷನ್ 447 ಅಡಿಯಲ್ಲಿ 3 ತಿಂಗಳು ಜೈಲು ಶಿಕ್ಷೆ 500 ರೂ. ದಂಡ. ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ, ಸೆಕ್ಷನ್ 448 ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ,1ಸಾವಿರ ರೂ ದಂಡ.ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳು 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ದಂಡದ ಹಣವನ್ನು ಹತ್ಯೆಯಾದ ಸಂದೀಪ್ ಶೆಟ್ಟಿ ಪತ್ನಿ ಸೌಮ್ಯಶ್ರೀ ಮತ್ತು ಮಗನಿಗೆ ನೀಡುವಂತೆ ಆದೇಶಿಸಲಾಗಿದೆ.

ಸಂತ್ರಸ್ತರು 357 ಎ ಅಡಿಯಲ್ಲಿ ಬರುವ ಸಂತ್ರಸ್ತ ಪರಿಹಾರ ನಿಧಿಯನ್ನು ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಉಳ್ಳಾಲ ಇನ್ಸ್‌ಪೆಕ್ಟರ್ ಆಗಿದ್ದ ಸಂಜೀವ್ ನಾಯಕ್ ಮಾಡಿದ್ದರು. ಅದರ ನಂತರ ಮಂಜುನಾಥ್ ಶೆಟ್ಟಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ 39 ಜನರ ವಿಚಾರಣೆ ನಡೆಸಲಾಗಿತ್ತು.

ಪ್ರಕರಣದ ಸಾಕ್ಷ ವಿಚಾರಣೆಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಜೆ.ವಿ.ನಾಯಕ್ ಮತ್ತು ಶಿವಪ್ರಸಾದ್ ಆಳ್ವ ನಡೆಸಿದ್ದರು. ನಂತರದಲ್ಲಿ ಪಬ್ಲಿಕ್ ಪ್ರಾಸಿಕ್ಯುಟರ್ ನಾರಯಣ ಶೇರಿಗಾರ್.ಯು ಅವರು ವಾದಿಸಿದ್ದರು.

Write A Comment