ಉಡುಪಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಗಾಂಜಾ ಸಹಿತ ಮಣಿಪಾಲ ಪೊಲೀಸರು ಇಂದ್ರಾಳಿ ರೈಲು ನಿಲ್ದಾಣದ ಸಮೀಪ ಬಂಧಿಸಿದ್ದಾರೆ.
ಬೆಂಗಳೂರು ಹೊಸಕೋಟೆಯ ಸೈಯದ್ ಗೌಸ್ (51) ಮತ್ತು ಕುಕ್ಕಿಕಟ್ಟೆ ಇಂದಿರಾನಗರ ನಿವಾಸಿ ಉದಯ ಕುಮಾರ್ (33) ಬಂಧಿತರು. ಬಂಧಿತ ಆರೋಪಿಗಳಿಂದ 20,000 ಮೌಲ್ಯದ ಒಟ್ಟು 2.150 ಕೆ.ಜಿ. ಗಾಂಜಾ, ನಗದು, ಮೊಬೈಲ್ ಹಾಗೂ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರಿನಿಂದ ಉಡುಪಿಗೆ ಬಂದ ಪ್ಯಾಸೆಂಜರ್ ರೈಲಿನಿಂದ ಇಳಿದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಮಣಿಪಾಲ ಇನ್ಸ್ಪೆಕ್ಟರ್ ಎಸ್.ವಿ. ಗಿರೀಶ್ ಹಾಗೂ ತಂಡದವರು ನಿಗಾ ಇಟ್ಟಿದ್ದರು. ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ಬೆನ್ನಟ್ಟಿ ಹಿಡಿದು ಚೀಲವನ್ನು ಪರಿಶೀಲಿಸಿದಾಗ ಗಾಂಜಾ ಸಿಕ್ಕಿತ್ತು.
ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಅಪರಿಚಿತ ವ್ಯಕ್ತಿಯಿಂದ ಗಾಂಜಾ ಖರೀದಿಸಿ ಉಡುಪಿ ಮತ್ತು ಮಣಿಪಾಲ ಪ್ರದೇಶದಲ್ಲಿ ಮಾರಾಟ ಮಾಡಲು ತಂದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ)