ಮಂಗಳೂರು, ಎ. 13: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ, ಎ.15ರ ಬೆಳಗ್ಗೆ 10:30 ಕ್ಕೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಸ್ಟಿಸ್ ಫಾರ್ ಬಾಳಿಗಾ, ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಜಂಟಿಯಾಗಿ ಸಾಮೂಹಿಕ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳ ಬಂಧನಕ್ಕೆ ಹಾಗೂ ಬಾಳಿಗಾ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸುವಂತೆ ಆಗ್ರಹಿಸಲಾಗುವುದು.
ಅಲ್ಲದೇ ಬಾಳಿಗಾ ಕೊಲೆ ಪ್ರಕರಣದಲ್ಲಿ ಮಂಗಳೂರಿನ ಹಲವು ಶ್ರೀಮಂತರು, ಪ್ರಭಾವಶಾಲಿಗಳು ಭಾಗಿಯಾಗಿದ್ದಾರೆ. ಯುವಬಿಗ್ರೇಡ್ ಸಂಸ್ಥಾಪಕ ನರೇಶ್ ಶೆಣೈ ಪ್ರಕರಣದ ಸೂತ್ರಧಾರ ಎಂದು ಪೊಲೀಸ್ ಇಲಾಖೆಯೇ ಗುರುತಿಸಿದೆ. ನಗರದ ಪೊಲೀಸ್ ಕಮಿಷನರ್ ಚಂದ್ರಶೇಖರ್ ತನಿಖೆಯ ನೇತೃತ್ವವನ್ನು ವಹಿಸಿಕೊಂಡು ತೆರೆಮೆರೆಯ ಪ್ರತಿಷ್ಟರನ್ನು ಬಂಧಿಸಲು ಮುಂದಾದ ಸಂದರ್ಭದಲ್ಲಿ ಕಾಣದ ಕೈಗಳು ಒಂದಾಗಿ ತನಿಖೆಯನ್ನು ದಿಕ್ಕು ತಪ್ಪಿಸುವ, ಸೂತ್ರಧಾರರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿವೆ.
ಈ ಹಿನ್ನಲೆಯಲ್ಲಿ ಸಮಾನ ಮನಸ್ಕ ವಿದ್ಯಾರ್ಥಿ, ಯುವಜನ, ಮಾನಹಕ್ಕು, ಮಹಿಳಾ ಸಂಘಟನೆಗಳು, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಗಳು ಜಂಟಿಯಾಗಿ ಸಾಮೂಹಿಕ ಧರಣಿ ಹಮ್ಮಿಕೊಂಡಿದ್ದು, ಮಂಗಳೂರಿನ ನ್ಯಾಯಪ್ರಿಯ ನಾಗರಿಕರು, ಸಂಘಟನೆಗಳು ಧರಣಿಯಲ್ಲಿ ಭಾಗವಹಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಪರವಾಗಿ ಪ್ರೊ. ನರೇಂದ್ರ ನಾಯಕ್, ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್ ಎಂ.ದೇವದಾಸ್ ಜಂಟಿ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.