(ಚಿತ್ರ,ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಬಿಳಿಬಣ್ಣದ ಜೆರ್ಸಿ, ತಲೆಗೆ ಹೆಲ್ಮೆಟ್, ಕೈಗೆ ಗ್ಲೌಸ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ ಒಂದಷ್ಟು ಮಂದಿಯ ತಂಡ ಇಂದು ಸೈಕಲ್ ಏರಿ ರಸ್ತೆಗಿಳಿದಿದ್ದರು. ಅವರ ಐಕಿ ಬಹುತೇಕರು ಫ್ರೋಫೇಶನಲ್ ಸೈಕ್ಲಿಸ್ಟ್ ಗಳಲ್ಲ. ಬದಲಾಗಿ ಹಲವರು ಪೊಲೀಸರು. ಇನ್ನು ಕೆಲವರು ನಾಗರೀಕರು. ಉಡುಪಿ ಬಾರ್ಡರ್ ಟು ಬಾರ್ಡರ್ ಸೈಕ್ಲಿಂಗ್ ಮಾಡಲು ಹೊರಟ ಇವರ ತಂಡದ ಕ್ಯಾಪ್ಟನ್ ಉಡುಪಿ ಎಸ್ಪಿ ಕೆ. ಅಣ್ಣಾಮಲೈ.
ಎಸ್ಪಿ ಅಣ್ಣಾಮಲೈ ಟೀಂ ಕ್ಯಾಫ್ಟನ್: ಭಾನುವಾರ ಬೆಳಿಗ್ಗೆ ಶಿರೂರು ಗಡಿಯಿಂದ ಆರಂಭಿಸಿ ಉಡುಪಿಯ ಹೆಜಮಾಡಿ ಅಂದರೆ ಸುಮಾರು 125 ಕಿ.ಮೀ. ದೂರ ಸಾಗಿದೆ ಇವರ ಸೈಕ್ಲಿಂಗ್. ಫಿಟ್ ನೆಸ್ ಹೆಚ್ಚಿಸಿಕೊಂಡು ಮಾನಸಿಕ ಸಾಮರ್ಥ್ಯವನ್ನು ವ್ರದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಇವರೆಲ್ಲರೂ ಈ ಹೊಸದೊಂದು ಪ್ರಯತ್ನಕ್ಕೆ ಕೈಹಾಕಿದ್ದರು. ಜನಸ್ನೇಹಿವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಲ್ಲಿ ಪರಿಚಯಿಸಿ ಸದಾ ಹೊಸತನದೊಂದಿಗೆ ಕೆಲಸ ಮಾಡುತ್ತ್ರುವ ಉಡುಪಿ ಎಸ್ಪಿ ಕೆ.ಅಣ್ಣಾಮಲೈ ಅವರು ಈ ಟೀಂ ಕ್ಯಾಪ್ಟನ್. ಉಡುಪಿ ಡಿವೈಎಸ್ಪಿ ಎಸ್.ಜೆ. ಕುಮಾರಸ್ವಾಮಿ, ಡಿಸಿಐಬಿ ಇನ್ಸ್ಪೆಕ್ಟರ್ ಜೈಶಂಕರ್ ಟಿ.ಆರ್ ಸೇರಿದಂತೆ 16 ಮಂದಿ ಪೊಲೀಸರು ಹಾಗೂ ಎಂಐಟಿ ಕಾಲೇಜು ಫ್ರೊಪೇಸರ್ಸ್, ಸ್ಟುಡೇಂಟ್ಸ್, ಉಡುಪಿ ಸೈಂಟ್ ಅಂತೋನಿ ಸೈಕಲ್ ವರ್ಕ್ಸ್ ಇದರ ಮಾಲೀಕರಾದ ರೇಗನ್ ಸೇರಿ 12 ಮಂದಿ ನಾಗರೀಕರು ಇದರಲ್ಲಿದ್ದರು. ಇವರ ಪೈಕಿ ಶಮೀಮ್, ಗಣೇಶ್ ಸೇರಿದಂತೆ ಮೂರ್ನಾಲ್ಕು ಮಂದಿ ಪ್ರೋಫೇಶನಲ್ ಸೈಕ್ಲಿಸ್ಟ್ ಆಗಿದ್ದಾರೆ.
125 ಕಿ.ಮೀ. ಸೈಕಲ್ ಪಯಣ: ಬೆಳಿಗ್ಗೆ ಬೈಂದೂರು ಸಮೀಪದ ಉಡುಪಿಯ ಗಡಿ ಪ್ರದೇಶವಾದ ಶಿರೂರಿನಿಂದ ಪ್ರಾರಂಭಗೊಂಡ ಇವರ ಸೈಕಲ್ ಜಾಥಾ 9.15ರ ಸುಮಾರಿಗೆ ಕುಂದಾಪುರದತ್ತ ಬಂದಿತ್ತು. ಕುಂದಾಪುರದ ಪೊಲೀಸ್ ಠಾಣೆ ಸಮೀಪದಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ಲಘುಪಹಾರ ಸೇವಿಸಿ ಪುನಃ ಇವರ ಸೈಕಲ್ ಸವಾರಿ ಹೊರಟಿದ್ದು ಉಡುಪಿಯತ್ತ. ಶಿರೂರಿನಿಂದ ಉಡುಪಿಯ ಹೆಜಮಾಡಿಯವರೆಗೂ 125 ಕಿಲೋಮೀಟರ್ ದೂರ ಕ್ರಮಿಸುವ ಗುರಿ ಕೊನೆಗೂ ಯಶಸ್ವಿಯಾಗಿತ್ತು. ಉಡುಪಿ ಸೈಂಟ್ ಅಂತೋನಿ ಸೈಕಲ್ ವರ್ಕ್ಸ್ ಅವರು 28 ಸೈಕಲ್ ನೀಡಿದ್ದರು. ಏಳೂವರೆ ಸಾವಿರ ರೂಪಾಯಿಯಿಂದ ಆರಂಭಗೊಂಡು ಎರಡುವರೆ ಲಕ್ಷಕ್ಕು ಅಧಿಕ ಮೌಲ್ಯದ ತರಹೇವಾರಿ ಸೈಕಲ್ ಇದ್ದವು. ಇನ್ನು ಅದಾನಿ ಗ್ರೂಪ್ ನವರು ಜೆರ್ಸಿ ವ್ಯವಸ್ಥೆಯನ್ನು ಮಾಡಿದ್ರು.
ಎಸ್ಪಿ ಆಗ್ಗಾಗೆ ಹೋಗ್ತಾರೇ ಸೈಕಲ್ ಸವಾರಿ….
ಇನ್ನು ಎಸ್ಪಿ ಅಣ್ಣಾಮಲೈ ಅವರು ಸೈಕಲ್ ಏರಿ ಸವಾರಿ ಹೊರಡುವುದು ಇದೇ ಮೊದಲೇನಲ್ಲ. ತಮ್ಮ ಬಿಡುವಿನ ವೇಳೆಯಲ್ಲಿ ಅಲ್ಲಿಲ್ಲಿ ಸೈಕಲ್ ಏರಿ ಹೊರಟೇ ಬಿಡುತ್ತಾರೆ. ಅವರಿಗೆ ಸಾಥ್ ನೀಡುವ ಒಂದಷ್ಟು ಮಂದಿ ಸಮಾನ ಮನಸ್ಕರು ಇದ್ದಾರೆ. ಸೈಕಲ್ ಸವಾರಿ ಪರಿಪಾಠವನ್ನು ಕರಗತ ಮಾಡಿಕೊಂಡಿರುವ ಇವರು ಗಂಟೆಗೆ 25 ಕಿ.ಮೀ ವೇಗದಲ್ಲಿ ಸೈಕಲ್ ಓಡಿಸುತ್ತಾರೆ. ಈ ಹಿಂದೊಮ್ಮೆ ಮಂಗಳೂರಿಂದ ಕೋಟೇಶ್ವರದವರೆಗೆ 110 ಕಿ.ಮೀ. ಸೈಕಲ್ ಜಾಥಾ ಮೂಲಕ ಅಣ್ಣಾಮಲೈ ಸಾಗಿಬಂದು ಜನರಲ್ಲಿ ಕುತೂಹಲ ಮೂಡಿಸಿದ್ರು. ಅಲ್ಲದೇ ಕಳೆದ ಭಾನುವಾರ ಜೋಮ್ಲುತೀರ್ಥದತ್ತ ಇವರ ಸೈಕಲ್ ಪಯಣ ಸಾಗಿದ್ದು ಕೆಲವರಿಗೆ ಮಾತ್ರವೇ ಗೊತ್ತಿತ್ತು. ಸೈಕಲ್ ಏರಿ ಹೊರಟರೇ ಗ್ರಾಮೀಣ ಜನರ ಕಷ್ಟ ಸುಖಗಳು ತಿಳಿಯುತ್ತೆ. ಜನಜೀವನವನ್ನು ಅತೀ ಸಮೀಪದಿಂದ ನೋಡಲು ಸೈಕಲ್ ಸವಾರಿ ಸಹಕಾರಿ ಎನ್ನುತ್ತಾರೆ ಎಸ್ಪಿ.
ಸೈಕಲ್ ಸವಾರಿ ಬಗ್ಗೆ ಹಲವರಲ್ಲಿ ಗೊಂದಲಗಳಿದೆ. ನಮ್ಮತ್ರ ಸೈಕಲ್ ಓಡಿಸಲು ಆಗುತ್ತೋ ಇಲ್ಲವೋ ಎನ್ನುವ ಭಯ ಕೆಲವರಲ್ಲಿದೆ. ಸೈಕಲ್ ಸವಾರಿ ಮೋಜಿನ ಜೊತೆಗೆ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ಕಂಡುಕೊಳ್ಳಲು ಮತ್ತು ಜನರಲ್ಲಿ ಸೈಕಲ್ ಸವಾರಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರ ಅಭಿಪ್ರಾಯ ಪಡೆದು ನಿರಂತರವಾಗಿ ಸೈಕ್ಲಿಂಗ್ ಕಾರ್ಯಕ್ರಮ ಆಯೋಜಿಸುವ ಇರಾದೆ ಎನ್ನುತ್ತಾರೆ ಉಡುಪಿ ಎಸ್ಪಿ ಕೆ.ಅಣ್ಣಾಮಲೈ.
ಒಟ್ಟಿನಲ್ಲಿ ಜನಸಮಾನ್ಯರೂ ಕೂಡ ಕಾರು ಬೈಕ್ ಮೊದಲಾದ ವಾಹನಗಳನ್ನೇ ಅವಲಂಭಿಸಿರುವ ಈ ಜಮಾನದಲ್ಲಿ ಉಡುಪಿ ಎಸ್ಪಿ ಹಾಗೂ ತಂಡದವರು ಮಾಡುತ್ತಿರುವ ಸೈಕಲ್ ಸವಾರಿ ಕಾರ್ಯ ಮತ್ತು ಅದರ ಹಿಂದಿರುವ ಸದುದ್ದೇಶ ಎಲ್ಲರಿಗೂ ಮಾದರಿಯಾಗಬೇಕಿದೆ.