(ವರದಿ,ಚಿತ್ರ- ಯೋಗೀಶ್ ಕುಂಭಾಸಿ)
ಕುಂದಾಪುರ: ಯಾರದ್ದೋ ತಪ್ಪಿಗೆ ನಮಗ್ಯಾಕೇ ಸಾರ್ ಈ ಶಿಕ್ಷೆ….ವರ್ಷವಿಡೀ ಪರೀಕ್ಷೆ ಬರೆಯುತ್ತಲೇ ಇರೋದಾ? ವಿದ್ಯಾರ್ಥಿಗಳ ವರ್ಷದ ಶ್ರಮಕ್ಕೆ ಬೆಲೆಯೇ ಇಲ್ಲವೇ? ಯಾಕೆ ಇವರೆಲ್ಲರೂ ನಮ್ಮ ಭವಿಷ್ಯದ ಜೊತೆ ಚೆಲ್ಲಾಟವಾದುತ್ತಿದ್ದಾರೆ? ಇವರು ತಪ್ಪು ಮಾಡುತ್ತಿರುವುದು ನಾವು ಓದುತ್ತಿರುವುದು.. ಎಕ್ಸಾಂ ಬರೆಯುತ್ತಿರುವುದು ಅಂದುಕೊಂಡಿದ್ದಾರೆಯೇ? ಇಲ್ಲ..ಇನ್ನು ನಾವು ಎಕ್ಸಾಂ ಬರೆಯಲ್ಲ.- ಇಷ್ಟೆಲ್ಲಾ ಆಕ್ರೋಷಗಳನ್ನು ವ್ಯಕ್ತಪಡಿಸಿದ್ದು ಕುಂದಾಪುರದ ವಿವಿಧ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು.
ಹೌದು..ಈ ಹಿಂದಿನ ಕೆಮಿಸ್ಟ್ರಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆ ಆ ಪರೀಕ್ಷೆಯನ್ನು ಮಾರ್ಚ್.31 ಅಂದರೇ ಇಂದು(ಗುರುವಾರ) ಮುಂದೂಡಿ ಆದೇಶಿಸಲಾಗಿತ್ತು. ಆದರೇ ಈ ಬಾರಿಯೂ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಸ್ಥಗಿತಗೊಳಿಸಿದ್ದು ಪಿಯುಸಿ ವಿದ್ಯಾರ್ಥಿಗಳನ್ನು ಕೆರಳಿಸಿತ್ತು. ಅದೆಷ್ಟೋ ವಿದ್ಯಾರ್ಥಿಗಳು ಪರೀಕ್ಷೆ ಸ್ಥಗಿತಗೊಂಡ ವಿಚಾರ ಗೊತ್ತಿರದ ಕಾರಣ ಪರೀಕ್ಷಾ ಕೇಂದ್ರದತ್ತ ಬಂದರೇ ಇನ್ನಷ್ಟು ವಿದ್ಯಾರ್ಥಿಗಳು ಈ ಗೊಂದಲದ ಬಗ್ಗೆ ಪ್ರತಿಭಟಿಸಲೇಬೇಕು ಎನ್ನುವ ಆಕ್ರೋಷದಿಂದ ಬಂದಿದ್ದರು. ಈ ಹಿಂದೊಮ್ಮೆ ಎಕ್ಸಾಂ ಬರೆದು ಬಳಿಕ ಯಾರದ್ದೋ ತಪ್ಪಿನಿಂದ ಪರೀಕ್ಷೆ ಮುಂದೂಡಲ್ಪಟ್ಟು ಬಳಿಕ ಆ ಪರೀಕ್ಷೆಗೂ ಇನ್ನಷ್ಟು ತಯಾರಿ ನಡೆಸಿ ಗುರುವಾರ ಬೆಳಿಗ್ಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲ್ಲ ಎನ್ನುವುದು ಗೊತ್ತಾಗುತ್ತಲೇ ಅವರು ಆಕ್ರೋಷಗೊಂಡಿದ್ದರು.
ಪರೀಕ್ಷಾ ಕೇಂದ್ರಗಳಿಂದ ಒಗ್ಗೂಡಿ ಹೊರಟ ವಿದ್ಯಾರ್ಥಿಗಳು ಕುಂದಾಪುರ ಮಿನಿ ವಿಧಾನಸೌಧದ ಎದುರು ಜಮಾಯಿಸಿದರು. ಬಳಿಕ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು ಎಂದು ಆಗ್ರಹಿಸಿದರು. ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಅವರಿಗೆ ಮನವಿಯನ್ನೂ ನೀಡಿದರು. ಎ.೩ ಮತ್ತು ೪ರಂದು ಜೆ.ಈ. ಲಿಖಿತ ಪರೀಕ್ಷೆ ಹಾಗೂ ೯ ಮತ್ತು ೧೦ರಂದು ಆನ್ಲೈನ್ ಪರೀಕ್ಷೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಮುಂದಿನ ದಿನಗಳಲ್ಲಿದ್ದು , ಈ ರೀತಿ ಗೊಂದಲವಾಗುವುದೇ ಆದಲ್ಲಿ ಮರುಪರೀಕ್ಷೆ ಬೇಡ. ಈ ಹಿಂದೆ ಬರೆದ ಪರೀಕ್ಷೆಗೆ ಅಂಕ ನೀಡಲಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಸಿದ ತಹಶಿಲ್ದಾರ್ ಅವರು, ಇದೊಂದು ಗಂಭೀರ ಸಮಸ್ಯೆ. ವಿದ್ಯಾರ್ಥಿಗಳಾದ ತಾವು ನೀಡಿದ ಮನವಿ ಹಾಗೂ ಹೇಳಿರುವ ಎಲ್ಲಾ ವಿಚಾರಗಳನ್ನು ಪಿಯು ಬೋರ್ಡ್ ನಿರ್ದೇಶಕರಿಗೆ ಶೀಘ್ರವೇ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.
ಮನವಿ ಸಲ್ಲಿಸುವ ವೇಳೆ ವಿದ್ಯಾರ್ಥಿಗಳ ಜೊತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಇದ್ದರು. ಜಿಲ್ಲಾ ಎಬಿವಿಪಿ ಸಂಚಾಲಕ ದಿಲೀಪ್, ತಾಲೂಕು ಸಂಚಾಲಕ ಶ್ರೀಧರ್, ಕುಂದಾಪುರ ನಗರ ಸಹಸಂಚಾಲಕ ಕಿಶನ್, ತಾಲೂಕು ಸಹಸಂಚಾಲಕ ನಿರಂಜನ್, ಸಂದೇಶ್ ಮೊದಲಾದವ್ರು ಉಪಸ್ಥಿತರಿದ್ದರು.
ಇನ್ನು ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ರಾಜ್ಯಾದ್ಯಂತ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದು ಅಹಿತಕರ ಘಟನೆಗಳು ನಡೆಯದಂತೆ ಕುಂದಾಪುರ ಮಿನಿವಿಧಾನಸೌಧದಲ್ಲಿರುವ ಉಪಖಜಾನೆ ಸಮೀಪ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಸ್ತಳದಲ್ಲಿ ಜಿಲ್ಲಾ ಶಸಸ್ತ್ರ ಮೀಸಲು ಪಡೆ ಪೊಲೀಸ್ ವಾಹನ ಮೊಕ್ಕಾಂ ಹೂಡಿದೆ.