ಕುಂದಾಪುರ: ತಾಲೂಕಿನ ನಾಡ ಗ್ರಾ.ಪಂ. ವ್ಯಾಪ್ತಿಯ ಬಡಾಕೆರೆ ಕಳುವಿನ ಬಾಗಿಲು ಎಂಬಲ್ಲಿ ಐಸ್ಪ್ಲಾಂಟ್ ನಿರ್ಮಾಣಕ್ಕೆ ವಿರೋಧಿಸಿ ಬಡಾಕೆರೆ ಗ್ರಾಮಸ್ಥರು ನಾಡ ಗ್ರಾಮಪಂಚಾಯತ್ ಕಛೇರಿಯೆದುರು ಪ್ರತಿಭಟನೆ ನಡೆಸಿ ಗಂಟೆಗಳ ಹೊತ್ತು ಧರಣಿ ಕುಳಿತ ಘಟನೆ ಬುಧವಾರ ನಡೆದಿದೆ.
ಬಡಾಕೆರೆ ಕಳುವಿನ ಬಾಗಿಲು ಎಂಬಲ್ಲಿ ವ್ಯಕ್ತಿಯೋರ್ವರು ಸುಮಾರು 30 ಸೆಂಟ್ಸ್ ಜಾಗದಲ್ಲಿ ಐಸ್ಪ್ಲಾಂಟ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಇದು ಜನವಸತಿ ಪ್ರದೇಶವಾದ ಕಾರಣ ಜನಜೀವನಕ್ಕೆ ತೊಂದರೆಯುಂಟಾಗಲಿದೆ, ಐಸ್ಪ್ಲಾಂಟ್ ಕೈಗಾರಿಕಾ ಉದ್ಯಮವಾದ ಕಾರಣ ಅದನ್ನು ಜನವಸತಿ ರಹಿತವಾದ ಸ್ಥಳದಲ್ಲಿ (ಇಂಡಸ್ಟ್ರಿಯಲ್ ಏರಿಯಾ) ನಿರ್ಮಿಸಿ, ಬದಲಾಗಿ ಹಲವು ಕೃಷಿಭೂಮಿಗಳು ಜನವಾಸ ಪ್ರದೇಶಗಳಿರುವ ಜಾಗದಲ್ಲಿ ನಿರ್ಮಾಣವಾದರೇ ಶಾಲಾಮಕ್ಕಳು, ಅನಾರೋಗ್ಯ ಪೀಡಿತರಿಗೆ ಸೇರಿದಂತೆ ನಿತ್ಯಬದುಕು ಸಾಗಿಸುವರಿಗೆ ಸಮಸ್ಯೆಯಾಗಲಿದೆ. ಕೈಗಾರಿಕೋಧ್ಯಮವನ್ನು ಕಾನೂನು ಪ್ರಕಾರವಾಗಿ ಅದಕ್ಕೆ ವಿಂಗಡಿಸಿದ ಪ್ರದೇಶದಲ್ಲಿ ಮಾಡಬೇಕು ಹೊರತು ಜನವಸತಿ ಪ್ರದೇಶದಲ್ಲಿ ಮಾಡುವುದು ತರವಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಒಂದೆರಡು ಬಾರೀ ಐಸ್ಪ್ಲಾಂಟ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾ.ಪಂ.ಗೆ ಆಕ್ಷೇಪ ಸಲ್ಲಿಸಿದರೂ ಕೂಡ ಗ್ರಾಮಪಂಚಾಯತ್ ಸ್ಥಳೀಯ ಗ್ರಾಮಸ್ಥರ ಮನವಿಗೆ ಸ್ಪಂದಿಸದೇ ಏಕಾಏಕಿ ಪರವಾನಿಗೆ ನೀಡುವ ಬಗ್ಗೆ ನಿರ್ಣಯ ಕೈಗೊಂಡು ಜನವಿರೋಧಿ ನಿರ್ಣಯಕ್ಕೆ ಕೈಹಾಕಿರುವುದು ಸರಿಯಲ್ಲ. ಕೂಡಲೇ ಗ್ರಾ.ಪಂ. ಸಮಸ್ಯೆಗಳ ಬಗ್ಗೆ ಒಳಿತು-ಕೆಡುಕು ಪರಾಮರ್ಷೆ ನಡೆಸಿ ಪರವಾನಿಗೆ ನೀಡಬಾರದು. ಒಂದೊಮ್ಮೆ ಪರವಾನಿಗೆ ನೀಡಿದ್ದೇ ಆದರೇ ಗ್ರಾಮಸ್ಥರೊಡಗೂಡಿ ಬ್ರಹತ್ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಗ್ರಾ.ಪಂ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಅರವಿಂದ ಪೂಜಾರಿ ಅವರಿಗೆ ಗ್ರಾಮಸ್ಥರು ಮನವಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷರು, ಸದಸ್ಯರ ಸಭೆಯಲ್ಲಿ ಬಹುಮತವಿದ್ದ ಕಾರಣ ಅನುಮತಿ ನೀಡಲು ನಿರ್ಣಯಿಸಲಾಗಿದ್ದು, ಯಾವುದೇ ಆಮಿಷಕ್ಕೂ ಒಳಗಾಗಿ ಪರವಾನಿಗೆ ನೀಡಲು ಮುಂದಾಗಿದ್ದಲ್ಲ. ಮುಂದಿನ ದಿನಗಳಲ್ಲಿ ಸರ್ವ ಸದಸ್ಯರೋಪಾದಿಯಲ್ಲಿ ಐಸ್ಪ್ಲಾಂಟ್ ನಿರ್ಮಾಣಕ್ಕೆ ಉದ್ದೇಶಿಸಿದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ವಸ್ತುಸ್ಥಿತಿಗಳನ್ನು ಅವಲೋಕಿಸಲಾಗುತ್ತದೆ. ಬಳಿಕ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಜನರಿಗೆ ತೊಂದರೆ ಉಂಟುಮಾಡುವ ಯಾವುದೇ ಕೆಲಸಕ್ಕೂ ನಮ್ಮ ಸಹಕಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ತಾಲೂಕುಪಂಚಾಯತ್ ಸದಸ್ಯ ಪ್ರವೀಣ್ ಶೆಟ್ಟಿ, ಮಾಜಿ ತಾಲೂಕುಪಂಚಾಯತ್ ಅಧ್ಯಕ್ಷ ಶಂಕರ ಶೆಟ್ಟಿ, ನಾಡ ಗ್ರಾಮಪಂಚಾಯತ್ ಸದಸ್ಯರಾದ ಶ್ರೀಧರ್ ದೇವಾಡಿಗ, ಪರ್ವತಿ ಮೊಗವೀರ, ದಿನೇಶ್ ಶೆಟ್ಟಿ, ಉದಯ ಜೋಗಿ, ಶೀಕಾಂತ್ ಶೆಟ್ಟಿ, ಗ್ರಾಮಸ್ಥರಾದ ಉದಯ ಪೂಜರಿ, ಮಹೇಶ್ ಪೂಜಾರಿ, ರವಿರಾಮ್ ದೇವಾಡಿಗ, ಮಹೇಶ್ ಮೆಂಡನ್, ಮಹೇಶ್ ಆಚಾರ್ಯ. ಸುಜಾತಾ ಮೊಗವೀರ, ಲಕ್ಷ್ಮಿ ಪೂಜಾರಿ, ಸರೋಜಾ ಮೊದಲಾದವರು ಉಪಸ್ಥಿತರಿದ್ದರು.