ಮಂಗಳೂರು. ಮಾ.29: ಮಂಗಳೂರು ದೇವಾಂಗ ಸಮಾಜದವರು ನಗರದ ಎಮ್ಮೆಕೆರೆ ಮೈದಾನದಲ್ಲಿ ಆಯೋಜಿಸಿದ್ದ ದೇವಾಂಗ ಸಮಾಜದ ರಾಷ್ಟ್ರೀಯ ಸಮಾವೇಶವನ್ನು ರವಿವಾರ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೇವಾಂಗ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಪಾರಾಗಲು ದೇಶಾದ್ಯಂತವಿರುವ ಇಂತಹ ಸಮುದಾಯ ಸಂಘಟನೆಗಳು ಒಗ್ಗಟ್ಟಾಗಬೇಕು. ಸಮುದಾಯದ ಅಭಿವೃದ್ಧಿಯೊಂದಿಗೆ ಈ ಶಕ್ತಿ ದೇಶದ ಒಳಿತಿಗೂ ಕೊಡುಗೆಯಾಗಲಿ ಎಂದು ಹೇಳಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಉಮಾಶ್ರೀ ಅವರು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ದೇವಾಂಗ ಸಮಾಜಸ್ಥರು ಸಂಘಟಿತರಾಗಬೇಕಾದ ಅಗತ್ಯವಿದ್ದು, ಸಂಘಟನೆಯನ್ನು ದೇವಾಂಗ ಸಮಾಜದ ಹಿತದೃಷ್ಟಿಯಿಂದ ಇನ್ನಷ್ಟು ಬಲಪಡಿಸಿ ನ್ಯಾಯೋಚಿತವಾದ ಹಕ್ಕುಗಳಿಗೆ ಹೋರಾಟ ನಡೆಸಬೇಕು ಎಂದು ಹೇಳಿದರು.
ನೇಕಾರಿಕೆಗೆ ಈ ಬಾರಿಯ ಬಜೆಟ್ನಲ್ಲಿ 26 ಕೋ.ರೂ. ಪ್ಯಾಕೇಜನ್ನು ಇಡಲಾಗಿದೆ. ಶೇ.1ರ ಬಡ್ಡಿದರದಲ್ಲಿ ನೇಕಾರರಿಗೆ ಸಾಲ ನೀಡಲಾಗುತ್ತಿದೆ. ವಿದ್ಯುತ್ ಮೂಲಕ ನಡೆಸುವ ಮಗ್ಗಗಳಿಗೆ ಪವರ್ ಸಬ್ಸಿಡಿ ನೀಡಲು ಸರಕಾರ ತೀರ್ಮಾನಿಸಿದೆ ಎಂದು ಉಮಾಶ್ರೀ ಹೇಳಿದರು.
ಪ್ರಥಮ ಬಾರಿಗೆ 1943ರಲ್ಲಿ ಮಂಗಳೂರಿನಲ್ಲಿ ದೇವಾಂಗ ಸಂಘಟನೆ ಆರಂಭಗೊಂಡಿತ್ತು. ಆದರೆ ಇಂದೂ ಕೂಡಾ ಈ ಸಮುದಾಯ ತೀರಾ ಹಿಂದು ಳಿದಿದೆ. ಈ ಬಗ್ಗೆ ಚಿಂತನೆ ಅಗತ್ಯ ಎಂದು ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ ಡಾ.ಜಿ.ರಮೇಶ್ ಹೇಳಿದರು.
ಸಂಸದ ನಳಿನ್ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ ಶುಭಾ ಕೋರಿದರು.
ಸಮಾ ವೇಶದಲ್ಲಿ ದೇವಾಂಗ ಸಮಾಜದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಝಾರ್ಖಂಡ್ ಶಾಸಕ ಮೋತಿಲಾಲ್ ದೇವಾಂಗ, ರಾಷ್ಟ್ರೀಯ ದೇವಾಂಗ ಒಕ್ಕೂಟದ ಅಧ್ಯಕ್ಷ ಅರುಣ್, ಒಡಿಶಾ ದೇವಾಂಗ ಸಮಾಜದ ಪ್ರತಿನಿಧಿ ಗೋಪಿನಾಥ್, ತಮಿಳು ನಾಡಿನ ಪ್ರತಿನಿಧಿ ಲಕ್ಷ್ಮಣ್ ಉಪಸ್ಥಿತರಿದ್ದರು.
ಹಂಪಿಯ ಶ್ರೀ ಗಾಯತ್ರಿ ಪೀಠದ ಸ್ವಾಮೀಜಿ ಶ್ರೀದಯಾನಂದ ಪುರಿ, ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಸ್ವಾಮೀಜಿ ಯೋಗಾನಂದ ಸರಸ್ವತಿ, ಶ್ರಿ ರಾಮಕೃಷ್ಣ ಮಠದ ಸ್ವಾಮೀಜಿ ಜಿತಕಾಮಾನಂದಾಜಿ, ಮಾಜಿ ಶಾಸಕ ಕುಂಬ್ಳೆ ಸುಂದರರಾವ್, ರವೀಂದ್ರ ಕಲ್ಬುರ್ಗಿ, ಸಂಘದ ಅಧ್ಯಕ್ಷ ವೆಂಕಟೇಶ್ ಆರ್., ಹಿರಿಯ ಮುಖಂಡ ಸಂಜೀವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಆಕರ್ಷಕ ಮೆರವಣಿಗೆ :
ಸಮಾವೇಶ ಉದ್ಘಾಟನೆಗೂ ಮುನ್ನ ಕಾರ್ಯಕ್ರಮದಲ್ಲಿ ಆಶೀರ್ವಾದ ನೀಡಲು ಬಂದಂತಹ ವಿವಿಧ ಸ್ವಾಮೀಜಿಗಳನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.