ಕುಂದಾಪುರ: ಯಕ್ಷಗಾನ ಮೇಳದವರ ಮಿನಿ ಬಸ್(ಕ್ಯಾಬ್) ವಾಹನವೊಂದು ಬೈಕಿಗೆ ಡಿಕ್ಕಿಯಾದ ಅಪಘಾತದಲ್ಲಿ ಬೈಕ್ ಸವಾರ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹಾಲಾಡಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಶಿರಿಯಾರ ಗುಡ್ಡೆಯಂಗಡಿ ಸಮೀಪದ ಯಡಾಡಿ ನಿವಾಸಿ ಗಣೇಶ್ ಹೆಗ್ಡೆ (36) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.
ಸೂರಾಲು ಎಂಬಲ್ಲಿ ರಾತ್ರಿ ಸಾಲಿಗ್ರಾಮ ಮೇಳದ ಯಕ್ಷಗಾನ ಮುಗಿಸಿ ಸಾಗರ ಕಡೆಗೆ ಪ್ರಯಾಣಿಸುತ್ತಿದ್ದ ಯಕ್ಷಗಾನ ಕಲಾವಿದರು ಇದ್ದ ಮಿನಿ ಬಸ್ಸು ಇದಾಗಿದ್ದು ಹಾಲಾಡಿ ಸರ್ಕಲ್ ಸಮೀಪ ಬೈಕಿಗೆ ಡಿಕ್ಕಿಯಾಗಿದೆ. ಮಿನಿ ಬಸ್ಸಿನಲ್ಲಿದ್ದ ಮೇಳದ ಕಲಾವಿದರು ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ಗಣೇಶ್ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಶಂಕರನಾರಾಯಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.