ಕನ್ನಡ ವಾರ್ತೆಗಳು

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಬ್ರಹ್ಮಾವರ ಮೂಲದ ದೇವಾಡಿಗ ಕುಟುಂಬದ ನಾಲ್ವರು ಸಾವು

Pinterest LinkedIn Tumblr

ಉಡುಪಿ/ಮುಂಬಯಿ: ಕಾರು ಹಾಗೂ ಟ್ರಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಉಡುಪಿಯ ಬ್ರಹ್ಮಾವರ ಮೂಲದ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಪುಣೆ-ಬೆಂಗಳೂರು ಹೆದ್ದಾರಿ ಸಮೀಪದ ಮಂಗರಾಯಾಚಿವಾಡಿ ಕ್ರಾಸ್‌ನಲ್ಲಿ ಮಂಗಳವಾರ ನಡೆದಿದೆ. ಅಪಘಾತದಲ್ಲಿ ದಂಪತಿ, ಮಗು ಮತ್ತು ಅವರ ಸಂಬಂಧಿ ಸಾವನ್ನಪ್ಪಿದ್ದಾರೆ.

Pune_Car_Accident

ಉಡುಪಿ ಜಿಲ್ಲೆಯ ಬ್ರಹ್ಮಾವರದ ಮೂಲದ ಪ್ರಸ್ತುತ ಘಾಟ್‌ಕೋಪರ್‌ ನಿವಾಸಿಗಳಾದ ಸಂತೋಷ್‌ ಡೊಂಬ ದೇವಾಡಿಗ (41), ಪೂರ್ಣಿಮಾ ಸಂತೋಷ್‌ ದೇವಾಡಿಗ (35), ನಾಲ್ಕು ವರ್ಷ ಪ್ರಾಯದ ಅನಿಷಾ, ಪುಣೆಯ ತಲೆಗಾಂವ್‌ ದಬಾಡಿ ನಿವಾಸಿ ಸುಪ್ರಿಯಾ ದತ್ತಾ ದೇವಾಡಿಗ (36) ಮೃತಪಟ್ಟವರು. ಮಂಗರಾಯಾಚಿವಾಡಿ ಕ್ರಾಸ್‌ ಬಳಿಯಲ್ಲಿ ಟ್ರಕ್‌ ಪೆಟ್ರೋಲ್‌ ಬಂಕ್‌ನಲ್ಲಿ ಇಂಧ‌ನ ತುಂಬಿಸಿಕೊಂಡು ಹೈವೆಗೆ ತಿರುಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಆಗಮಿಸುತ್ತಿದ್ದ ಕಾರು ಟ್ರಕ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ನಡೆದಿದೆ.

ಘಟನೆಯಲ್ಲಿ ದತ್ತಾ ದೇವಾಡಿಗ (45) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರು ಕೊಲ್ಲಾಪುರ ಛತ್ರಪತಿ ಪ್ರಮೀಳಾ ರಾಜೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇದೇ ವಾಹನದಲ್ಲಿದ್ದ ಕಪಿಲ್‌ ವಿಠ್ಠಲ್‌ ದೇವಾಡಿಗ, ಅವನೀಶ್‌ ದತ್ತ ದೇವಾಡಿಗ ಅವರು ಅಪಾಯದಿಂದ ಪಾರಾಗಿದ್ದಾರೆ.

ಬ್ರಹ್ಮಾವರಕ್ಕೆ ಬಂದು ವಾಪಾಸ್ಸಾಗುತ್ತಿದ್ದರು…..
ಕಳೆದ ಭಾನುವಾರ ಬ್ರಹ್ಮಾವರದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಈ ಕುಟುಂಬವು ಸೋಮವಾರ ಸಂಜೆ ಬ್ರಹ್ಮಾವರದಿಂದ ಹೊರಟು ಮಂಗಳವಾರ ಬೆಳಗ್ಗೆ ಮುಂಬಯಿಗೆ ತೆರಳುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರಿನ ಒಂದು ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.

ಮೃತದೇಹಗಳನ್ನು ಪುಣೆಯ ತಲೆಗಾಂವ್‌ ದಬಾಡಿಗೆ ಮಂಗಳವಾರ ಸಂಜೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ದೇವಾಡಿಗ ಸಂಘ ಪುಣೆ ಅಧ್ಯಕ್ಷ ಪ್ರಭಾಕರ ದೇವಾಡಿಗ ಸಂತಾಪ ಸೂಚಿಸಿದ್ದಾರೆ.

Write A Comment