(ವರದಿ,ಚಿತ್ರ- ಯೋಗೀಶ್ ಕುಂಭಾಸಿ)
ಕುಂದಾಪುರ: ತಾಲೂಕಿನ ನಾವುಂದದ ತಮ್ಮ ಮನೆಯಲ್ಲಿ ಒಂಟಿಯಾಗಿದ್ದ 62 ವರ್ಷ ಪ್ರಾಯದ ಮಾಧವ ಪೂಜಾರಿಯನ್ನು ಶುಕ್ರವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದ ಆರೋಪಿಯನ್ನು ಮೂರು ದಿನದಲ್ಲಿ ಉಡುಪಿ ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ ಮಾರ್ಗದರ್ಶನದಲ್ಲಿ ಪೊಲೀಸರು ಬಂಧಿಸಿದ್ದಾರೆ.
(ಕೊಲೆಯಾದ ಮಾಧವ ಪೂಜಾರಿ)
ಮೂಲತಃ ಶಿರಸಿಯವನಾಗಿರುವ ಪ್ರಸ್ತುತ ನಾವುಂದ ನಿವಾಸಿ ನರಸಿಂಹ ಪೂಜಾರಿ (46) ಆರೋಪಿಯಾಗಿದ್ದು ಸದ್ಯ ಪೊಲೀಸರ ವಶದಲ್ಲಿದ್ದಾನೆ.
(ಕೊಲೆಗಾರ ನರಸಿಂಹ ಪೂಜಾರಿ)
ಬಿಜೂರು ಹೊಸ್ಕೋಟೆ ಮೂಲದ ಮಾಧವ ಪೂಜಾರಿ ಮುಂಬೈಯಲ್ಲಿನ ಮಫತ್ ಲಾಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಮೂರು ವರ್ಷಗಳ ಹಿಂದಷ್ಟೇ ನಿವ್ರತ್ತಿ ಹೊಂದಿದ ಬಳಿಕ ನಾವುಂದ ರಾಷ್ಟ್ರೀಯ ಹೆದ್ದಾರಿಯ ಅನತಿ ದೂರದಲ್ಲಿರುವ ಪಡುವಾಯಿನಮನೆ ಎಂಬಲ್ಲಿನ ಪತ್ನಿ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಪತ್ನಿ ಗುಲಾಬಿ ಹಾಗೂ ಪುತ್ರ ಮುಂಬೈಯಲ್ಲಿ ಮತ್ತು ಇಬ್ಬರು ಪುತ್ರಿಯರು ಮದುವೆಯಾಗಿ ಗಂಡನ ಮನೆಯಲ್ಲಿದ್ದರು.
ಖತರ್ನಾಕ್ ಕಿರಾತಕ
ಶಿರಸಿ ಮೂಲದವನದ ಈತ ಅಲ್ಲಿ ಪತ್ನಿಯನ್ನು ಬಿಟ್ಟು ನಾವುಂದದ ಪಡುವಾಯಿನಮನೆ ರೇವತಿಯನ್ನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಬ್ಬರಿಗೆ ನಾಲ್ಕು ವರ್ಷ ಪ್ರಾಯದ ಮಗುವು ಇದೆ. ಎಲ್ಲರ ಬಳಿಯೂ ವೈಮನಸ್ಸು ಹೊಂದಿದ ಈತ ಯಾರ ಸಂತೋಷವನ್ನು ಸಹಿಸುತ್ತಿರಲಿಲ್ಲ. ಖತರ್ನಾಕ್ ಕಿರಾತಕನಾಗಿದ್ದ ಈತ ಆಸುಪಾಸಿನಲ್ಲಿ ಕೆಟ್ಟವನಾಗಿಯೇ ಬಿಂಬಿತನಾಗಿದ್ದ.
ಹಣಕ್ಕಾಗಿ ಹತ್ತಿರ ಸಂಬಂಧಿಯ ಮರ್ಡರ್?
ಶಿರಸಿಯವನಾದ ನರಸಿಂಹ ಪೂಜಾರಿ ಎರಡನೇ ಮದುವೆಯಾದ ಹುಡುಗಿಯೇ ನಾವುಂದದ ರೇವತಿ. ರೇವತಿ ಆಶಾಕಾರ್ಯಕರ್ತೆಯಾಗಿದ್ದು ಕೊಲೆಯಾದ ಮಾಧವ ಪೂಜಾರಿ ಹೆಂಡತಿಯ ದಾಯಾದಿ. ಹೇಳಲು ಏನು ಕೆಲಸ-ಕಾರ್ಯ ಮಾಡಿಕೊಂಡಿರದ ನರಸಿಂಹ ಪೂಜಾರಿ ಇತ್ತೀಚೆಗೆ ಎರಡು ವರ್ಷಗಳ ಹಿಂದಿನಿಂದ ಮನೆಯಲ್ಲಿಯೇ ಇದ್ದ. ಖರ್ಚಿಗೆ ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಿದ್ದ ಈತ ಮಾಧವ ಪೂಜಾರಿಯೊಂದಿಗೆ ಹೇಳಿಕೊಳ್ಳುವ ಬಾಂಧವ್ಯವನ್ನು ಇಟ್ಟುಕೊಂಡಿರಲಿಲ್ಲ. ಶನಿವಾರ ಬೆಳಿಗ್ಗೆ ಮಾಧವ ಪೂಜಾರಿ ಹಿರಿಯ ಪುತ್ರಿ ತನ್ನ ಗಂಡ ಹಾಗೂ ಪುತ್ರನೊಂದಿಗೆ ಆಗಮಿಸುವ ಮತ್ತು ಎಲ್ಲರೂ ಸೇರಿ ಭಾನುವಾರದಂದು ಮುಂಬೈಗೆ ಪ್ರಯಾಣ ಬೆಳೆಸುವ ಬಗ್ಗೆಯೂ ತಿಳಿದಿದ್ದ ಈತ ಹಣಕ್ಕಾಗಿ ಒಂದು ಸ್ಕೆಚ್ ರೂಪಿಸಿದ್ದ.
ಹೊಂಚುಹಾಕಿದ್ದ ಕಿರಾತಕ
ಮಗಳ ಆಗಮನದ ಸಂತಸದಲ್ಲಿದ್ದ ಮಾಧವ ಪೂಜಾರಿ ಶುಕ್ರವಾರ ರಾತ್ರಿ ತನ್ನೊಬ್ಬನಿಗೆ ಬೇಕಾದ ಅಡುಗೆ ತಯಾರಿಸಲು ನಾವುಂದ ಪೇಟೆಯ ಅಂಗಡಿಯೊಂದಕ್ಕೆ ತೆರಳಿ ಅಲ್ಲಿ ಹಸಿಮೆಣಸು ಹಾಗೂ ಒಂದೆರಡು ತರಕಾರಿ ಸಾಮಾಗ್ರಿ ಖರೀಧಿಸಿ ಅಂಗಡಿಯವರ ಬಳಿ ಆತ್ಮೀಯವಾಗಿಯೇ ಮಾತನಾಡಿ ಮನೆಗೆ ವಾಪಾಸ್ಸಾಗುತ್ತಾರೆ. ಮನೆಗೆ ಬಂದು ಅಡುಗೆ ತಯಾರಿಸಿ ಊಟಕ್ಕೆ ಅಣಿಯಾಗುವ ವೇಳೆ ಮುಖ್ಯ ದ್ವಾರದ ಮೂಲಕ ಒಳ ಪ್ರವೇಶಿಸಿದ ನರಸಿಂಹ ಪೂಜಾರಿ ತಾನೂ ತಂದಿದ್ದ ಕತ್ತಿಯಲ್ಲಿ ಮಾಧವ ಪೂಜಾರಿ ತಲೆ ಹಾಗೂ ದೇಹದ ಭಾಗಗಳಿಗೆ ಕಡಿಯುತ್ತಾನೆ. ಏಕಾಏಕಿ ಹಲ್ಲೆಯಿಂದ ಕಂಗಾಲಾದ ಮಾಧವ ಪೂಜಾರಿ ಕಿರುಚಾಟ ನಡೆಸಿದರೂ ಯಾವುದೇ ಪ್ರಯೋಜನವಗಿಲ್ಲ. ಮನೆಯ ಬಾತ್ ರೂಂ ಹಾಗೂ ಅಡುಗೆ ಕೋಣೆ ನಡುವಿನ ಫ್ಯಾಸೇಜ್ ನಲ್ಲಿ ರಕ್ತ ಮಡುವಿನಲ್ಲಿ ಮಾಧವ ಪೂಜಾರಿ ಬೀಳುತ್ತಾರೆ.
ಹಣಕ್ಕಾಗಿ ಹುಡುಕಾಟ ನಡೆಸಿದ
ಮಾಧವ ಪೂಜಾರಿಯನ್ನು ಅಮಾನುಷವಾಗಿ ಕೊಚ್ಚಿ ಕೊಲೆ ಮಾಡಿದ ಬಳಿಕ ಹಣ ಹಾಗೂ ಚಿನ್ನಾಭರಣಕ್ಕಾಗಿ ಮನೆಯ ಕೋಣೆಯಲ್ಲಿರುವ ಕಪಾಟು ಮೊದಲಾದವುಗಳನ್ನು ಜಾಲಾಡಿದ ಈತ ಏನು ಸಿಕ್ಕದಿದ್ದಾಗ ಕಪಾಟಿನ ಬೀಗಗಳಿದ್ದ ಲೇಡಿಸ್ ಪರ್ಸ್ ಕೊಂಡೊಯುತ್ತಾನೆ. ಅಲ್ಲದೇ ಮನೆಯ ಪಾರ್ಶ್ವದಲ್ಲಿನ ಒಂದು ಬಾಗಿಲನ್ನು ಒಳಗಿನಿಂದ ಚಿಲಕ ಹಾಕಿ ಮುಖ್ಯಧ್ವಾರಕ್ಕೆ ತಾನು ತಂದಿದ್ದ ಬೀಗ ಜಡಿದ ಈ ಖತರ್ನಾಕ್ ಪರ್ಸ್ ಹಾಗೂ ಕೀಲಿಕೈ ಅನ್ನು ಮನೆಯ ಎದುರಿನ ಬಾವಿಗೆ ಎಸೆದು ಪರಾರಿಯಾಗುತ್ತಾನೆ. ಇನ್ನು ಕೊಲೆಯ ಬಳಿಕ ಜಾಣತನ ಪ್ರದರ್ಶನಕ್ಕೆ ಹೊರಟ ಆತ ಮನೆಯಲ್ಲಿ ಎಣ್ಣೆ ಚೆಲ್ಲಿ ತನಿಖೆ ಜಾಡು ತಪ್ಪಿಸುವ ಕೆಲಸ ಮಾಡಿದ್ದ.
ಚಿನ್ನಕ್ಕಾಗಿ ಬಂದು ಕದ್ದಿದ್ದು ಚಿಲ್ಲರೆ..!
ಹಣ ಹಾಗೂ ಚಿನ್ನಾಭರಣ ದೋಚಲು ಬಂದು ಮಾಧವ ಪೂಜಾರಿಯನ್ನು ಕೊಚ್ಚಿ ಕೊಂದ ನರಸಿಂಹ ಪೂಜಾರಿಗೆ ಆ ಮನೆಯಲ್ಲಿ ಸಿಕ್ಕಿದ್ದು ಕೇವಲ ಚಿಲ್ಲರೆ ಕಾಸು ಹಾಗೂ ಎರಡು ಮೊಬೈಲ್ ಮತ್ತು ಒಂದು ದುಬಾರಿ ವಾಚ್ ಮಾತ್ರ. ಅಲ್ಲದೇ ಹಳೆ ಮಾಡೆಲ್ ಕ್ಯಾಮೆರಾವೊಂದನ್ನು ಈತ ಲಪಟಾಯಿಸಿ ಕೈಗೆ ಸಿಕ್ಕ ಸುಗಂಧದ್ರವ್ಯ ಬಾಟಲಿನೊಂದಿಗೆ ತೆರಳಿದ್ದ. ಆದರೇ ಕಳವಾಗಿದೆ ಎನ್ನಲಾಗಿದ್ದು 20 ಗ್ರಾಂ ತೂಕದ ಚಿನ್ನದ ಸರಗಳು ಮತ್ರ ಮನೆಯಲ್ಲಿಯೇ ಪೊಲಿಸರಿಗೆ ದೊರಕಿತ್ತು.
ಮಗಳು ಬಂದಾಗ ಬೆಳಕಿಗೆ ಬಂದ ಪ್ರಕರಣ
ಇಷ್ಟೆಲ್ಲಾ ಘಟನೆಗಳು ಶುಕ್ರವಾರ ರತ್ರಿಯೇ ನಡೆದುಹೋಗಿರುತ್ತದೆ. ಮೈಸೂರಿನಲ್ಲಿದ್ದ ಮಾಧವ ಪೂಜಾರಿ ಹಿರಿಯ ಪುತ್ರಿ ಪ್ರಭಾವತಿ ಅಳಿಯ ಹಾಗೂ ಮೊಮ್ಮಗು ಶನಿವಾರ ಬೆಳಿಗ್ಗೆ ನಾವುಂದಕ್ಕೆ ಬರುತ್ತಾರೆ. ಆದರೇ ಮನೆಯ ಮುಂಭಾಗಕ್ಕೆ ಹಾಕಿದ್ದ ಬೀಗ ಅವರಲ್ಲಿ ಕೊಂಚ ಅನುಮಾನಕ್ಕೆ ಎಡೆಮಾಡಿಕೊಟ್ಟು ಈ ಬಗ್ಗೆ ಸ್ಥಳೀಯ ಮನೆ ಹಾಗೂ ಮುಂಬೈಯಲ್ಲಿದ್ದ ತಾಯಿ ಗುಲಾಬಿಗೆ ಫೊನು ಮಾಡಿ ವಿಚಾರಿಸುವಾಗ ಬೀಗ ಒಡೆದು ಒಳಗೆ ತೆರಳುವ ಬಗ್ಗೆ ತಿಳಿಸಿದ್ದಾರೆ. ಅಂತೆಯೇ ಬಾಗಿಲ ಬೀಗ ಒಡೆದು ಒಳಹೋಗಿ ಮನೆಯ ಎಲ್ಲೆಡೆ ಹುಡುಕುವಾಗ ಮನೆಯ ಬಾತ್ ರೂಂ ಪ್ಯಾಸೇಜ್ ಬಳಿ ಬೋರಲಾಗಿ ಮಾಧವ ಪೂಜಾರಿ ಶವವಾಗಿ ಸಿಕ್ಕಿದ್ದರು. ಶುದ್ಧ ಸಸ್ಯಹಾರಿಯಾಗಿದ್ದ ಮಾಧವ ಅವರು ಶುಕ್ರವಾರ ಸಂಜೆ ವೇಳೆ ಅಡುಗೆ ಮಾಡಲೆಂದು ಮೆಣಸು ತಂದು ರಾತ್ರಿಗಾಗಿ ತನಗೆ ಬೇಕಾದ ಅಡುಗೆ ತಯಾರಿಸಿದ್ದರು. ಆದರೇ ಮಾಡಿದ ಅಡುಗೆ (ರೊಟ್ಟಿ ಮತ್ತು ಚಟ್ನಿ ಇತ್ತು ಎನ್ನಲಾಗಿದೆ) ಮಾತ್ರ ಹಾಗೆಯೇ ಇತ್ತು. ಇದೆನ್ನೆಲ್ಲಾ ಗಮನಿಸಿದಾಗ ರಾತ್ರಿಯೇ ಕೊಲೆ ನಡೆದಿರುವ ಬಗ್ಗೆ ಶಂಶಯವೂ ವ್ಯಕ್ತವಾಗಿತ್ತು.
ಬೆಚ್ಚಿಬೀಳಿಸಿದ್ದ ಮರ್ಡರ್
ಬೈಂದೂರು ಭಾಗದಲ್ಲಿ ವರ್ಷಕ್ಕೊಂದರಂತೆ ನಡೆಯುತ್ತಿರುವ ಕೊಲೆ ಮೊದಲಾದ ಪ್ರಕರಣಗಳಿಂದ ಜನರು ಈಗಗಲೇ ರೋಸಿ ಹೋಗಿದ್ದು ನಾವುಂದದಲ್ಲಿ ನಡೆದ ಒಂಟಿ ವ್ರದ್ಧನ ಕೊಲೆ ಈ ಭಾಗದ ಜನರನ್ನು ಇನ್ನಷ್ಟು ಬೆಚ್ಚಿಬೀಳಿಸಿತ್ತು. ರಾತ್ರಿ 10 ಗಂಟೆಯ ಒಳಗೆ ಹೆದ್ದಾರಿಯ ಅನತಿ ದೂರದಲ್ಲಿರುವ ಮನೆಯಲ್ಲಿಯೇ ಇಂತಹಾ ಘಟನೆ ನಡೆದರೇನರು ಇನ್ನೆಷ್ಟು ಸೇಫ್ ಎಂಬ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಸ್ಥಳಕ್ಕೆ ಭೇಟಿ ನೀಡಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರಾತ್ರಿ ವೇಳೆ ಇಂತಹ ಘಟನೆಗಳು ಜಾಸ್ಥಿಯಾಗಿದ್ದು ಪೊಲೀಸರು ರಾತ್ರಿ ಗಸ್ತು ಜಾಸ್ಥಿ ಮಾಡಬೇಕಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆದು ತಪ್ಪಿತಸ್ಥರ ಬಂಧನವಾಗಬೇಕಿದೆ. ಮುಂದಿನ ದಿನದಲ್ಲಿ ಪೊಲೀಸ್ ಇಲಾಖೆಯೂ ಮುಂಜಾಗ್ರತಾ ಕ್ರಮ ವಹಿಸಬೇಕಿದೆ ಎಂದಿದ್ದರು.
ಎಸ್ಪಿ ಅಣ್ಣಾಮಲೈ ಮಾರ್ಗದರ್ಶನ ತನಿಖೆ ಚುರುಕು
ಶನಿವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಎಸ್ಪಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬೈಂದೂರು ಎಸ್.ಐ. ಸಂತೋಷ ಕಾಯ್ಕಿಣಿ, ಗಂಗೊಳ್ಳಿ ಎಸ್.ಐ. ಸುಬ್ಬಣ್ಣ ನೇತ್ರತ್ವದಲ್ಲಿ ತನಿಖೆ ಚುರುಕುಗೊಂಡಿದ್ದು ಅನುಮಾನಾಸ್ಪದ ಇಪ್ಪತ್ತಕ್ಕೂ ಅಧಿಕ ವ್ಯಕ್ತಿಗಳ ವಿಚಾರಣೆಯನ್ನು ನಡೆಸಲಾಗಿತ್ತು.
ಇದನ್ನೂ ಓದಿರಿ- ಮನೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿಯ ಬರ್ಬರ ಕೊಲೆ -ನಾವುಂದದಲ್ಲಿ ಘಟನೆ | ಬೆಚ್ಚಿಬಿದ್ದ ಬೈಂದೂರು ಜನತೆ