ಮಂಗಳೂರು, ಮಾ.19: ನೆಹರು ಯುವ ಕೇಂದ್ರ ಮಂಗಳೂರು, ಎಸ್ಡಿಎಂ ಸಮೂಹ ಸಂಸ್ಥೆಗಳು, ಜಿಲ್ಲಾ ಯುವಜನ ಒಕ್ಕೂಟದ ಆಶ್ರಯದಲ್ಲಿ ಜಿಲ್ಲಾ ಯುವ ಸಮಾವೇಶ ಶನಿವಾರ ನಗರದ ಎಸ್ಡಿಎಂ ಕಾಲೇಜಿನಲ್ಲಿ ನಡೆಯಿತು.
ಜಿಲ್ಲಾ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು, ಭಾರತಕ್ಕೆ ಸರಿಸಾಟಿ ಕೇವಲ ಭಾರತ ಮಾತ್ರವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ.ಯುವಕರು ತಮ್ಮ ಜವಾಬ್ಧಾರಿಯನ್ನು ಅರಿತುಕೊಂಡು ಕಾರ್ಯ ನಿರ್ವಹಿಸುವ ಮೂಲಕ ಯುವಶಕ್ತಿ ಸದ್ಬಳಕೆಯಾಗಬೇಕಿದೆ ಎಂದು ಕರೆನೀಡಿದರು.
ಯುವಜನಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಅಭಯಚಂದ್ರ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿ ಜಿಲ್ಲೆಗಳಲ್ಲಿ ಕಬಡ್ಡಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 3 ಕೋಟಿ ರೂ. ಅನುದಾನವನ್ನು ರಾಜ್ಯ ಬಜೆಟ್ನಲ್ಲಿ ಮೀಸಲಿಡಲಾಗಿದ್ದು, ಯುಜನ ಸಬಲೀಕರಣಕ್ಕೆ ಸರಕಾರ ಒತ್ತು ನೀಡಲಿದೆ. ಪ್ರತಿ ಹಳ್ಳಿ, ಗ್ರಾಮಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಯುವ ತಂಡಗಳನ್ನು ಗುರುತಿಸಿ ಯುವಜನ ಇಲಾಖೆಯಿಂದ ಪ್ರೋತ್ಸಾಹ ನೀಡುವಲ್ಲಿಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ನಲ್ಲಿ ಅನುದಾನ ಘೋಷಿಸಿದ್ದಾರೆ ಅಭಯಚಂದ್ರ ಜೈನ್ ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅತ್ಯುತ್ತಮ ಯುವ ಮಂಡಳಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಯುವಜನ ಮೇಳದ ವಿಜೇತರಿಗೆ ಸನ್ಮಾನ, ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯ ವಿಜೇತರಿಗೆ ಗೌರವ, ಕ್ರೀಡಾ ಸಲಕರಣೆಗಳ ವಿತರಣೆಯನ್ನು ಮಾಡಲಾಯಿತು.
ವೇದಿಕೆಯಲ್ಲಿ ಜಿಲ್ಲಾ ನೆಹರೂ ಯುವ ಕೇಂದ್ರದ ಸಂಚಾಲಕಿ ಸಿಂಥಿಯಾ ಲೋಬೋ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ್ ಸಾಲಿಯಾನ್ ಉಪಸ್ಥಿತರಿದ್ದರು