ಮಂಗಳೂರು, ಮಾರ್ಚ್ 19: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಕಳ್ಳತನ ಇತರ ದೇವಸ್ಥಾನಗಳಿಗೆ ಎಚ್ಚರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ನಿರ್ದೇಶನ ನೀಡಿದ್ದಾರೆ.
ದೇವಸ್ಥಾನ, ದೇವಸ್ಥಾನದ ಸೊತ್ತು, ಆಭರಣಗಳ ಭದ್ರತಾ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ಅವರು, ‘ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕುವುದನ್ನು ನಿಯಂತ್ರಿಸಬೇಕು. ದೇವಸ್ಥಾನಗಳ ಆಡಿಟ್ಅನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಬದಲು ಸರ್ಕಾರಿ ಸಂಸ್ಥೆಯಡಿಯಲ್ಲಿ ಆಡಿಟ್ ಮಾಡಿಸಬೇಕು’ ಎಂದು ಹೇಳಿದರು.
‘ಕೊಲ್ಲೂರಿನ ದೇವಾಲಯದಲ್ಲಿ ನಡೆದ ಕಳ್ಳತನ ಘಟನೆಯ ತಪ್ಪುಗಳಿಂದ ನಾವು ಪಾಠ ಕಲಿಯ ಬೇಕಾಗಿದೆ. ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಸಿಸಿಟಿವಿ ಆಳವಡಿಸಲು ಕ್ರಮ ಕೈಗೊಳ್ಳಬೇಕು. ದೇವಾಲದಲ್ಲಿರುವ ಎಲ್ಲಾ ದೇವರ ಚಿನ್ನ, ಬೆಳ್ಳಿ ಮೂರ್ತಿಯ ನಿವ್ವಳ ತೂಕ, ಹಣದ ಮೌಲ್ಯಮಾಪನ ಮಾಡಿ ಪರಿಶೀಲಿಸಬೇಕು’ ಎಂದು ಸೂಚಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಅವರು, ‘ದೇವಾಲಯಗಳ ಅತಿಥಿ ಗೃಹಗಳಿಗೆ ಬರುವ ಭಕ್ತಾಧಿಗಳ ಗುರುತಿನ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಬೆಕು’ ಎಂದು ತಿಳಿಸಿದರು