ಮಂಗಳೂರು,ಮಾ.16 : ನಗರದ ಹಲವೆಡೆಗಳಲ್ಲಿ ಮನಪಾದಿಂದ ಪರವಾನಿಗೆ ಪಡೆಯದೆ ಅನಧೀಕೃತವಾಗಿ ವ್ಯಾಪರ ನಡೆಸುತ್ತಿದ್ದ ಗೂಡಂಗಡಿಗಳನ್ನು ಬುಧವಾರ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ, ಕಂದಾಯ ಅಧಿಕಾರಿ ಪ್ರವೀಣ್ ಚಂದ್ರ, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ವಿಜಯ್ ಹಾಗೂ ಸಹಾಯಕ ಅಧಿಕಾರಿಗಳು ಮತ್ತು ಪೊಲೀಸ್ ಹಾಗೂ ಕೆ.ಎಸ್.ಆರ್.ಪಿ ತುಕಡಿಗಳ ಸಹಕಾರದೊಂದಿಗೆ ಅನಧೀಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು.
ಇಂದು ಮುಂಜಾನೆಯಿಂದಲೇ ಮಂಗಳೂರಿನ ಸಿಟಿ ಬಸ್ ಸ್ಟ್ಯಾಂಡ್, ರಾವ್ ಎಂಡ್ ರಾವ್ ಸರ್ಕಲ್ ಮುಂತಾದ ಕಡೆಗಳಲ್ಲಿ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಗರದ ಇನ್ನೂ ಹಲವೆಡೆ ಇಂತಹ ಗೂಡಗಂಡಿಗಳ ತೆರವು ಕಾರ್ಯಾಚರಣೆ ನಡೆಸಲಿರುವುದಾಗಿ ತಿಳಿಸಿದ್ದಾರೆ.
ಅನಧೀಕೃತ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿ ಮಾಲಕರಿಗೆ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಬಳಿಕ ಕೂಡ ಅನಧೀಕೃತ ಗೂಡಂಗಡಿಗಳು ಕಾರ್ಯಾಚರಿಸುತ್ತಿದ್ದ ಹಿನ್ನೆಲೆಯಲ್ಲಿ ಮ.ನ.ಪಾ ಆಯುಕ್ತರ ನೇತೃತ್ವದಲ್ಲಿ, ಕಂದಾಯ ಅಧಿಕಾರಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದರು.
ಇದೇ ಸಂದರ್ಭ ಪರವಾನಿಗೆ ನವೀಕರಣಗೊಳ್ಳದ ಕೆಲವು ನಂದಿನಿ ಹಾಲಿನ ಬೂತನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದು, ಈ ಸಂದರ್ಭ ಅಧಿಕಾರಿಗಳು ಹಾಗೂ ಬೂತ್ನ ಮಾಲಕರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಈ ವೇಳೆ ಬೂತ್ನ ಮಾಲಕರು ತಮ್ಮ ಬೂತ್ ಹೊರಗೆ ಅನಧೀಕೃತವಾಗಿ ಹಾಕಿದ್ದ ಕಂಬಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.
ಆರೋಪ :
ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಬೂತ್ ಮಾಲಕರು, ನಾವು ಪರವಾನಿಗೆ ಹೊಂದಿದ್ದರೂ ಪಾಲಿಕೆ ಅಧಿಕಾರಿಗಳು ಹಾಲಿನ ಬೂತ್ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಮಳೆಗಾಲದ ಸಂದರ್ಭ ಬೂತ್ನ ಒಳಗೆ ಮಳೆನೀರು ಬಾರದಂತೆ ನಾವು ಕಟ್ಟೆ ಕಟ್ಟಿದ್ದು, ಇದರ ಅಧಾರಕ್ಕಾಗಿ ಹಾಕಿದ ಕಂಬಗಳು ಹೊರ ಭಾಗದಲ್ಲಿ ಇದ್ದ ಕಾರಣ ಅಧಿಕಾರಿಗಳು ಕಂಬಗಳನ್ನು ಜೆ.ಸಿ.ಬಿಯಿಂದ ತೆರವುಗೊಳಿಸಿದ್ದಾರೆ. ಈ ಸಂದರ್ಭ ನೀರಿನ ಟ್ಯಾಂಕ್ ಹೊಡೆದು ಹಾನಿಯಾಗಿದೆ ಎಂದು ನಂದಿನಿ ಹಾಲಿನ ಬೂತ್ ಒಂದರ ಮಾಲಕರು ಆರೋಪಿಸಿದ್ದಾರೆ.