ಕನ್ನಡ ವಾರ್ತೆಗಳು

ನಾಳೆ ಮನಪಾ ಚುನಾವಣೆ : ಮೇಯರ್ ಸ್ಥಾನಕ್ಕೆ ಮಹಮ್ಮದ್ ಕುಂಜತ್‌ಬೈಲ್,ಹರಿನಾಥ್ ಹೆಸರು ಮುಂಚೂಣಿಯಲ್ಲಿ.. ಉಪಮೇಯರ್‍ ಸ್ಥಾನ ಬಿಜೆಪಿಯ ಸುಮಿತ್ರಾ ಕರಿಯರಿಗೆ ಖಚಿತ

Pinterest LinkedIn Tumblr

Mcc_building_pics

_ ಸತೀಶ್ ಕಾಪಿಕಾಡ್

ಮಂಗಳೂರು, ಮಾ.10: ಮಂಗಳೂರು ಮಹಾನಗರಪಾಲಿಕೆಯ 18ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಮಾ. 11 ರಂದು ಬೆಳಿಗ್ಗೆ 11.30ಕ್ಕೆ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸದ್ಯಕ್ಕೆ ಪ್ರಸಕ್ತ ಸಾಲಿನ ಮೇಯರ್ ಗಾದಿಯು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪ ಮೇಯರ್ ಸ್ಥಾನವು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿತ್ತು. ಪ್ರಸಕ್ತ ಅವಧಿಯಲ್ಲಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕಾರಣ ಮೇಯರ್ ಆಗಿ ಕಾಂಗ್ರೆಸ್‌ನ ಜೆಸಿಂತಾ ವಿಜಯಾ ಆಲ್ಪ್ರೆಡ್ ಹಾಗೂ ಉಪ ಮೇಯರ್ ಆಗಿ ಪುರುಷೋತ್ತಮ ಚಿತ್ರಾಪುರ ಆಯ್ಕೆಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅವಧಿಯು ಮಾ. 11ರಂದು ಕೊನೆಗೊಳ್ಳಲಿದೆ.

ಆದರೆ ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮೇಯರ್ ಪ.ಪಂ. ಮಹಿಳೆಗೆ ಮೀಸಲಾಗಿದೆ. 60 ಸದಸ್ಯರಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಸಿಪಿಎಂ, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ ಒಬ್ಬರು ಸದಸ್ಯರನ್ನು ಹೊಂದಿದೆ.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರೊಳಗೆ ತೀವ್ರ ಸ್ಪರ್ಧೆ..

ಪ್ರಸಕ್ತ ಸಾಲಿನ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್ ಸದಸ್ಯರೊಳಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕೆಂದು ಕಾಂಗ್ರೆಸ್‌ನ ಒಂದು ಗುಂಪಿನಿಂದ ತೀವ್ರವಾದ ಒತ್ತಡ ಬಂದ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ಕುಂಜತ್‌ಬೈಲ್ ವಾರ್ಡಿನ ಮಹಮ್ಮದ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ಆದರೆ ಪಾಲಿಕೆಯ ಹಿರಿಯ ಸದಸ್ಯ ಮರಕಡ 14ನೇ ವಾರ್ಡಿನ ಹರಿನಾಥ್ ಅವರ ಹೆಸರನ್ನು ಪಕ್ಷ ಅಯ್ಕೆ ಮಾಡಿದೆ ಎಂದು ಕಾಂಗ್ರೆಸ್‌ನ ಇನ್ನೊಂದು ಮೂಲ ತಿಳಿಸಿದೆ.

ಉಳಿದಂತೆ ಪಾಲಿಕೆಯ ಹಿರಿಯ ಸದಸ್ಯರಾಗಿರುವ ಭಾಸ್ಕರ್ ಮೊಯ್ಲಿ, ಯುವ ಸದಸ್ಯರಾದ ನವೀನ್ ಡಿಸೋಜಾ, ದೀಪಕ್ ಪೂಜಾರಿ, ಅಬ್ದುಲ್ ರವೂಫ್ ಹೆಸರು ಮೇಯರ್ ರೆಸ್‌ನಲ್ಲಿದೆ. ಕಾಂಗ್ರೆಸ್ ಪಕ್ಷ ಯಾರ ಹೆಸರನ್ನು ಅಂತಿಮಗೊಳಿಸಲಿದೆ ಎಂಬ ಕುತೂಹಲಕ್ಕೆ ನಾಳೆ ಬೆಳಿಗ್ಗೆ ತೆರೆ ಬೀಳಲಿದೆ..

ಉಪಮೇಯರ್ ಸ್ಥಾನ ಬಿಜೆಪಿಗೆ…

ಮುಂದಿನ ಮೇಯರ್ ಗಾದಿಯು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಅಧಿಕ ಸಂಖ್ಯೆಯನ್ನು ಹೊಂದಿರುವ ಕಾಂಗ್ರೆಸ್‌ನ 35 ಸದಸ್ಯರು ಕೂಡಾ ಮೇಯರ್ ಸ್ಥಾನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಆದರೆ ಉಪಮೇಯರ್ ಸ್ಥಾನ ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಯಾರೂ ಇಲ್ಲ. ಹಾಗಾಗಿ ಈ ಬಾರಿ ಉಪಮೇಯರ್ ಸ್ಥಾನ ಬಿಜೆಪಿಯ ಸುಮಿತ್ರಾ ಕರಿಯ ಅವರಿಗೆ ಅನಾಯಾಸವಾಗಿ ದೊರೆಯುವುದು ಖಾತ್ರಿಯಾಗಿದೆ. ಬಿಜೆಪಿ ಸದಸ್ಯೆ ಸುಮಿತ್ರಾ ಕರಿಯ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಆಂದು ಬಿಜೆಪಿ ಪ್ರಾಬಲ್ಯವಾಗಿದ್ದಾಗ ಕಾಂಗ್ರೆಸ್‌ಗೆ ಮೇಯರ್ ಸ್ಥಾನ – ಇಂದು ಕಾಂಗ್ರೆಸ್‌ನಲ್ಲಿ ಸಂಖ್ಯಾ ಬಲವಿದ್ದರೂ ಬಿಜೆಪಿಗೆ ಉಪಮೇಯರ್ ಪಟ್ಟ

2012-13ನೆ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪ್ರಾಬಲ್ಯವಾಗಿದ್ದರೂ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಯ ನಾಮಪತ್ರದಲ್ಲಿ ಆದ ಕಣ್ತಪ್ಪಿನಿಂದಾಗಿ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಒಲಿದಿತ್ತು. ಇದೀಗ ಮೀಸಲಾತಿಯಂತೆ ಕಾಂಗ್ರೆಸ್‌ನಲ್ಲಿ ಅರ್ಹ ಅಭ್ಯರ್ಥಿಯ ಕೊರತೆಯಿಂದಾಗಿ ಉಪ ಮೇಯರ್ ಸ್ಥಾನ ಅನಾಯಾಸವಾಗಿ ಬಿಜೆಪಿಗೆ ಸಿಗಲಿದೆ. ಒಟ್ಟಿನಲ್ಲಿ ಈ ಬಾರಿಯ ಮೇಯರ್- ಉಪ ಮೇಯರ್ ಚುನಾವಣೆ ಕುತೂಹಲವನ್ನು ಸೃಷ್ಟಿಸಿದೆ.

Write A Comment