ಕುಂದಾಪುರ: ಗಂಗೊಳ್ಳಿ ಸಮೀಪದ ನಾಯಕವಾಡಿ ಗುಜ್ಜಾಡಿ ಎಂಬಲ್ಲಿ ದುಷ್ಕರ್ಮಿಗಳು ಜಾನುವಾರು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಬುಧವಾರ ರಾತ್ರಿ ನಾಯಕವಾಡಿಯ ರಾಮ ಭಜನಾ ಮಂದಿರದ ಸಮೀಪದಲ್ಲಿ ರಾತ್ರಿ ವೇಳೆ ನಿಂತಿದ್ದ ಜಾನುವಾರಿನ ಭುಜದ ಮೇಲೆ ಮಾರಕಾಸ್ತ್ರಗಳಿಂದ ಕಡಿದು ಗಾಯಗೊಳಿಸಲಾಗಿದ್ದು ಗುರುವಾರ ಘಟನೆ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡಿದ್ದ ಈ ಜಾನುವಾರನ್ನು ಪಶು ವೈದ್ಯಾಧಿಕಾರಿಗಳ ಮೂಲಕ ಚಿಕಿತ್ಸೆ ನೀಡಿದ್ದಾರೆ. ಬಲವಾದ ಮಾರಕಾಸ್ತ್ರದ ಹೊಡೆತಕ್ಕೆ ಸಿಕ್ಕು ಜಾನುವಾರಿನ ಭುಜವನ್ನು ಕತ್ತರಿಸಿದೆ.
ಸದ್ಯ ಜಾನುವಾರು ಚಿಕಿತ್ಸೆಗೆ ಸ್ಪಂಧಿಸಿದ್ದು ಸಮೀಪದ ಮನೆಯೊಂದರಲ್ಲಿ ಆಶ್ರಯ ನೀಡಲಾಗಿದೆ.
ಖಂಡನೆ: ದುಷ್ಕರ್ಮಿಗಳು ಜಾನುವಾರಿನ ಮೇಲೆ ರಾತ್ರಿ ನಡೆಸಿದ ಹಲ್ಲೆಯ ಬಗ್ಗೆ ಎಲ್ಲೆಡೆ ಆಕ್ರೋಷ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳಿಯರು ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಕಠಿನ ಕ್ರಮ ಜರಗಿಸಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದೆ.