ಮಂಗಳೂರು, ಮಾ.4: ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಮಂಗಳೂರು ಸಂಗೀತ ಭಾರತಿ ಪ್ರತಿ ಷ್ಠಾನ, ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ ಧಾರವಾಡ, ಪಬ್ಲಿಕ್ ರಿಕ್ರಿಯೇಶನ್ ಅಸೋಸಿಯೇಶನ್ ಗಂಗಾವತಿ ಇದರ ವತಿಯಿಂದ ಗುರುವಾರ ನಗರದ ಪುರಭವನದಲ್ಲಿ ಆಯೋಜಿಸಲಾದ ಡಾ.ಪುಟ್ಟರಾಜ ಗವಾಯಿಯವರ 103ನೆ ಜನ್ಮದಿನ ಕಾರ್ಯಕ್ರಮದಲ್ಲಿ ಗ್ವಾಲಿಯರ್ ಘರಾನದ ಸುಪ್ರಸಿದ್ಧ ಹಿರಿಯ ಗಾಯಕ ಮುಂಬೈನ ಪಂ. ವಿದ್ಯಾಧರ್ ವ್ಯಾಸ್ ಅವರಿಗೆ ‘ಪುಟ್ಟರಾಜ ಸನ್ಮಾನ 2016’ ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂ. ವಿದ್ಯಾಧರ್ ವ್ಯಾಸ್ ಅವರು, ಕಲೆಯು ಮಾನವನ ಕ್ರಿಯಾಶೀಲ ಬದು ಕಿಗೆ ಪೂರಕವಾಗಿದೆ ಎಂದು ಹೇಳಿದರು.ಶತಮಾನಗಳಿಂದಲೂ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತ ಪರಂಪರೆಯಾಗಿ ಬೆಳೆದು ಬಂದಿದ್ದು, ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ. ಸಂಗೀತದ ‘ರಾಗ’ ಪರಂಪರೆ ಒಂದು ಜೀವಂತ ಮಾದರಿಯಾಗಿ ನಮ್ಮ ನಡುವೆ ಕ್ರಿಯಾಶೀಲ, ಆಧ್ಯಾತ್ಮಿಕ ಅನುಭೂತಿಯೊಂದಿಗೆ ಸಾಂಸ್ಕೃತಿಕ ಪರಂಪರೆಯನ್ನು ನಿರ್ಮಿಸಿದೆ. ಪಂಡಿತ್ ಪುಟ್ಟರಾಜ ಗವಾಯಿ ಈ ಪರಂಪರೆಯನ್ನು ವಿಸ್ತರಿಸಿದವರು. ಅವರು ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಾನುರಾಗಿಯಾಗಿದ್ದರು. ಅಂತಹ ವ್ಯಕ್ತಿಗಳ ಹೆಸರಿನ ಪ್ರಶಸ್ತಿ ಸ್ವೀಕರಿಸಲು ತಾನು ಸಂತಸಪಡುವುದಾಗಿ ಅವರು ತಿಳಿಸಿದರು.
ಪುಟ್ಟರಾಜ ಗವಾಯಿ ಕೇವಲ ಸಂಗೀತ ಸಾಧಕರಾಗಿರಲಿಲ್ಲ. ಅವರು ಈ ನಾಡಿನಲ್ಲಿ ಅಂಧರ ಬಾಳಿನಲ್ಲಿ ಬೆಳಕಾದ ಮಹಾನ್ ಚೇತನ ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ವಹಿಸಿದ್ದರು.
ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ, ಕಾರ್ಯದರ್ಶಿ ಡಾ.ಎಂ.ವೆಂಕಟೇಶ್ ಕುಮಾರ್, ಸಂಗೀತ ಭಾರತಿ ಪ್ರತಿಷ್ಠಾನದ ಪದಾಧಿಕಾರಿಗಳಾದ ಪಂಡಿತ್ ನರೇಂದ್ರ ಎಲ್.ನಾಯಕ್, ಉಸ್ತಾದ್ ರಫೀಕ್ ಖಾನ್ ಮೊದಲಾದವರು ಉಪಸ್ಥಿತರಿದ್ದರು
ಗಾಯಕ ವೌನೇಶ್ ಕುಮಾರ್ ಛಾವಣಿ ಪ್ರಾರ್ಥಿಸಿದರು. ಸಂಗೀತ ಭಾರತಿ ಪ್ರತಿಷ್ಠಾನದ ಖಜಾಂಚಿ ಉಷಾಪ್ರಭಾ ಎನ್. ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪಂ.ವಿದ್ಯಾಧರ್ ವ್ಯಾಸರ ಸಂಗೀತ ಕಛೇರಿ ನಡೆಯಿತು.