ವಿಟ್ಲ, ಮಾ.03 : ವಿಟ್ಲ-ಪುತ್ತೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಚಂದಳಿಕೆ ಬಳಿ 20 ಅಡಿ ಆಳದಿಂದ ಮನೆಯ ಅಂಗಳಕ್ಕೆ ಪಲ್ಟಿಯಾದ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾವಿತ್ರಿ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೀರಕಂಬ ನಿವಾಸಿ ದಿನೇಶ್ ಮಯ್ಯ ಹಾಗೂ ಸಾವಿತ್ರಿ ವಿಟ್ಲ ಕಡೆಯಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಚಂದಳಿಕೆ ಶಾಲೆಯ ಸಮೀಪ ಮುಂದುಗಡೆಯಿಂದ ಬರುತ್ತಿದ್ದ ರಿಕ್ಷಾವನ್ನು ತಪ್ಪಿಸುವ ಸಂದರ್ಭ ಘಟನೆ ನಡೆದಿದೆ. ಸ್ಥಳೀಯರು ಕೂಡಲೇ ಸಾವಿತ್ರಿ ಅವರನ್ನು ವಿಟ್ಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.