ಕುಂದಾಪುರ: ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿಯೇ ಇರುವ ಶ್ರೀ ಕೋಟಿಲಿಂಗೇಶ್ವರ ಟವರ್ಸ್ ಎನ್ನುವ ವಾಣಿಜ್ಯ ಸಂಕೀರ್ಣದಲ್ಲಿರುವ ಮೊಬೈಲ್ ಅಂಗಡಿ ಹಾಗೂ ಕೆಳ ಭಾಗದಲ್ಲಿರುವ ಟೈಲರ್ ಅಂಗಡಿಯೊಂದಕ್ಕೆ ಕಳ್ಳರು ಕನ್ನ ಹಾಕಿದ ಘಟನೆ ಬುಧವಾರ ತಡರಾತ್ರಿ ನಡೆದಿದ್ದು ಮಾ.3 ಗುರುವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ.
ಸನ್ನಿಧಿ ಮೊಬೈಲ್ ಅಂಗಡಿ ಹಾಗೂ ಯು ಲೈಕ್ ಫ್ಯಾಶನ್ ಎನ್ನುವ ಟೈಲರ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ ಅಲ್ಲದೇ ಸಮೀಪದ ಚಿನ್ನದ ಅಂಗಡಿಯ ಶಟರ್ ಬೀಗ ಒಡೆದು ಕಳ್ಳತನ ನಡೆಸಲು ವಿಫಲ ಯತ್ನ ನಡೆಸಲಾಗಿದೆ. ಸನ್ನಿಧಿ ಮೊಬೈಲ್ ಅಂಗಡಿಯಲ್ಲಿ ಸಂಪೂರ್ಣ ಮೊಬೈಲ್ ಫೋನುಗಳು ಹಾಗೂ ವಸ್ತುಗಳನ್ನು ತಡಕಾಡಿ ಅಂಗಡಿ ತುಂಬೆಲ್ಲಾ ಎಸೆದಿದ್ದು, ಎದುರಿನ ಗಾಜು ಪುಡಿಗೈಯಲಾಗಿದೆ. ಅಲ್ಲದೇ ಸ್ವಲ್ಪ ನಗದು ಮತ್ತು ರಿಪೇರಿಗೆ ಬಂದ ಕೆಲವು ಮೊಬೈಲ್ ಸೆಟ್ ಎಗರಿಸಲಾಗಿದೆ. ಇನ್ನು ಟೈಲರ್ ಅಂಗಡಿ ಒಳಗಿದ್ದ 5 ಸಾವಿರಕ್ಕೂ ಅಧಿಕ ನಗದು ಕಳವು ಮಾಡಲಾಗಿದ್ದು ಹೆಚ್ಚ್ನ ಹಣಕ್ಕೆ ಅಂಗಡಿಯಲ್ಲಿ ತಡಕಾಡಿದ ಕುರುಹುಗಳಿದೆ.
ಕಳ್ಳನಿಗೆ ಆಗಿತ್ತು ಗಾಯ?!
ಸನ್ನಿಧಿ ಮೊಬೈಲ್ ಅಂಗಡಿಯ ಬೀಗ ಒಡೆಯುವಾಗ ಕಳ್ಳರ್ನ ದೇಹದ ಯಾವುದೋ ಭಾಗಕ್ಕೆ ಗಾಯವಾಗಿದೆ. ಶಟರ್ ಸಮೀಪದಲ್ಲಿ ರಕ್ತದ ಗುರುತುಗಳು ಕಾಣಿಸಿದ್ದು ಬೀಗ ಒಡೆಯುವ ವೇಳೆ ಬಲವಾದ ವಸ್ತು ತಗುಲಿ ಈ ಗಾಯ ಸಂಭವಿಸಿದೆ ಎನ್ನಲಾಗಿದೆ. ಒಳ ಪ್ರವೇಶಿಸಿದ ಕಳ್ಳರು ಮುಂಭಾದ ಗಾಜಿನ ಬಾಗಿಲು ಒಡೆದಿದ್ದು ಸಂಪೂರ್ಣ ವಸ್ತುಗಳನ್ನು ಅಂಗಡಿ ತುಂಬೆಲ್ಲಾ ಚೆಲ್ಲಾಪಿಲ್ಲಿಗೊಳಿಸಿದ್ದಾರೆ.
8 ತಿಂಗಳ ಹಿಂದೆ ನಡೆದಿತ್ತು ಕಳ್ಳತನ..!
ಕೋಟೇಶ್ವರ ಸನ್ನಿಧಿ ಮೊಬೈಲ್ ಅಂಗಡಿಯಲ್ಲಿ ಕಳೆದ ವರ್ಷ ಜುಲೈ 2 ತಾರೀಖಿನಂದು ಕಳ್ಳತನ ನಡೆದಿದ್ದು ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಸೆಟ್ ಕಳವು ಮಾಡಿದ್ದರು. ಆದರೇ ಕುಂದಾಪುರ ಪೊಲೀಸರ ಕಾರ್ಯಾಚರಣೆ ವೇಳೆ ರಾಜಸ್ಥಾನ ಮೂಲದ ಕಳ್ಳರು ಸಿಕ್ಕಿ ಬಿದ್ದಿದ್ದು ಈ ಅಂಗಡಿಗೆ ಸಂಬಂದಪಟ್ಟ 30% ವಸ್ತುಗಳು ಲಭಿಸಿದ್ದವು. 8 ತಿಂಗಳ ಹಿಂದೆ ನಡೆದ ಕಳ್ಳತನದ ಬಳಿಕ ಬೆಲೆ ಬಾಳುವ ಮೊಬೈಲ್ ಫೋನುಗಳನ್ನು ನಿತ್ಯ ರಾತ್ರಿ ಮನೆಗೆ ಕೊಂಡೊಯ್ಯುವ ಪರಿಪಾಠವನ್ನು ಮೊಬೈಲ್ ಅಂಗಡಿ ಮಾಲೀಕರು ಮಾಡಿಕೊಂಡಿದ್ದು ನಿನ್ನೆ ಹೆಚ್ಚಿನ ಕಳ್ಳತನವಾಗಿಲ್ಲ.
ನಡೆದು ಬಂದರೇ ಕಳ್ಳರು?
ಮೇಲ್ನೋಟಕ್ಕೆ ಅಂಗಡಿ ಬಗ್ಗೆ ತಿಳಿದಿರುವವರೇ ಕಳ್ಳತನ ಮಾಡಿರಬಹುದು ಎನ್ನಲಾಗಿದೆ. ಕಳ್ಳರು ತಪ್ಪಿಸಿಕೊಳ್ಳುವ ವೇಳೆ ಸಮೀಪದ ಅಂಗಡಿಯ ಹೆಂಚಿನ ಮೇಲ್ಮಾಡಿನ ಮೇಲೆ ಕಾಲಿಟ್ಟು ಹಲವು ಹೆಂಚುಗಳು ಪುಡಿಯಾಗಿದೆ. ಅಲ್ಲದೇ ಬೀಗ ಒಡೆಯಲು ತಂದ ಕಬ್ಬಿಣದ ವಸ್ತು ಹಾಗೂ ಬೆಳಕಿನ ವ್ಯವಸ್ಥೆಗಾಗಿ ತಂದಿದ್ದ ಲೈಟರ್ ಸಮೀಪದಲ್ಲಿ ಪತ್ತೆಯಾಗಿದೆ. ಶ್ವಾನದಳದ ಪರಿಶೀಲನೆ ವೇಳೆ ಅಂಗಡಿಯ ಹಿಂಭಾಗದಿಂದ ಹಾದು ಹೋದ ಆತ ಕೋಟೇಶ್ವರ-ಹಳೆಅಳಿವೆ ರಸ್ತೆ ಮೂಲಕ ಸಾಗಿ ಅಲ್ಲಿಂದ ಮುಕ್ಕೂಲು ಕೀ.ಮೀ. ದೂರದ ಚಿಪಾನಬೆಟ್ಟು ರಸ್ತೆಯ ಗದ್ದೆಗಳ ಮೇಲೆ ನಡೆದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಕೆರೆ ಮೂಲಕ ಹಾದು ಹೋದ ಮಾಹಿತಿ ಲಭಿಸಿದೆ.
ಕುಂದಾಪುರ ಎಸ್.ಐ. ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.