ಮಂಗಳೂರು, ಫೆ.27: ಫೆ.24ರಂದು ನಡೆದ ಮಹಾನಗರ ಪಾಲಿಕೆಯ ವಿಶೇಷ ಸಭೆ ಅಸಿಂಧುವಾಗಿದ್ದು, ಅಲ್ಲಿ ಕೈಗೊಂಡ 19 ಕೋಟಿ ರೂ. ಕಾಮಗಾರಿಗಳ ಅನುಮೋದನೆ ಭ್ರಷ್ಟಾಚಾರದ ಮುನ್ಸೂಚನೆಯನ್ನು ನೀಡುತ್ತಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಪಾಲಿಕೆಯ ವಿಪಕ್ಷ ನಾಯಕ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 19 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳಿಗೆ ಪೂರ್ವಾನುಮೋದನೆ ನೀಡಲು ಮೇಯರ್ಗೆ ಅಧಿಕಾರವಿಲ್ಲ ಎಂದರು.
ಕಾನೂನು ಬಾಹಿರವಾಗಿ ಸದನದ ನಡಾವಳಿ ನಡೆಸಿದ ಮೇಯರ್ ಮತ್ತು ಪಾಲಿಕೆಯ ಮುಖ್ಯ ಸಚೇತಕರನ್ನು ಅವರ ಸ್ಥಾನದಿಂದ ವಜಾಗೊಳಿಸಿ ಅವರ ಪಾಲಿಕಾ ಸದಸ್ಯತ್ವ ರದ್ದುಗೊಳಿಸಲು ರಾಜ್ಯ ಸರಕಾರವನ್ನು ಕೋರಲಾಗುವುದು. ತಪ್ಪಿದಲ್ಲಿ ಕಾನೂನು ಕ್ರಮ ಜರಗಿಸಲು ವಕೀಲರ ಮೂಲಕ ನೋಟಿಸ್ ನೀಡಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಪ್ರೇಮನಂದ, ತಿಲಕ್ರಾಜ್, ರೂಪಾ.ಡಿ. ಬಂಗೇರಾ ಮುಂತಾದವರು ಉಪಸ್ಥಿತರಿದ್ದರು.