ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ದಾಮೋದರ್ ಕೆಮಿಕಲ್ಸ್ ಎನ್ನುವ ಇಂಡಸ್ಟ್ರಿಯ ದಾಸ್ತಾನು ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಗೋದಾಮಿನಲ್ಲಿದ್ದ ಪ್ರಿಕ್ಷನ್ ಪೌಡರ್ ಚೀಲಗಳು ಹೊತ್ತಿ ಉರಿದು ಸಂಪೂರ್ಣ ಕಟ್ಟಡ ಹಾನಿಯಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗುತ್ತಿದ್ದು ಗೋದಾಮು ಭಾಗಶ: ಧರೆಗುರುಳಿದೆ.

ಘಟನೆ ವಿವರ: ಯಜ್ನೇಶ್ ಹಾಗೂ ಅರವಿಂದ ಭಟ್ ಮಾಲೀಕತ್ವದ ದಾಮೋದರ ಕೆಮಿಕಲ್ಸ್ ಎನ್ನುವ ರಾಸಾಯನಿಕ ಉತ್ಪನ ತಯಾರಿಕ ಘಟಕ ಕೋಟೇಶ್ವರದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ವಾಹನಗಳ ಬ್ರೇಕ್ ಲೈನರ್ ಭಾಗಗಳಿಗೆ ಉಪಯೋಗವಾಗುವ ಪ್ರಿಕ್ಷನ್ ಪೌಡರುಗಳನ್ನು ತಯಾರಿಸುವ ಕಂಪೆನಿ ಇದಾಗಿದ್ದು ಉತ್ಪನ್ನ ಘಟಕದ ಸಮೀಪದಲ್ಲೇ ಇರುವ ದೊಡ್ಡ ಗೋದಾಮಿನಲ್ಲಿ ಉತ್ಪನ್ನಗಳನ್ನು ದಾಸ್ತಾನು ಮಾಡಲಾಗುತ್ತಿತ್ತು. 25 ಕೆ.ಜಿ. ತೂಕದ ಚೀಲಗಳಲ್ಲಿ ಇಂತಹ ಉತ್ಪನ್ನಗಳಿದ್ದು ಗೋದಾಮಿನಲ್ಲಿ ಇಂತಹ ಸಾವಿರಾರು ಚೀಲಗಳಿದ್ದು ಇವಗಳ ಒಟ್ಟು ಮೌಲ್ಯ 30 ಲಕ್ಷಕ್ಕೂ ಅಧಿಕ ಎನ್ನಲಾಗುತ್ತಿದೆ.
ವಿದ್ಯುತ್ ಸಂಪರ್ಕ ಇರಲಿಲ್ಲ?
ಮೇಲ್ನೋಟಕ್ಕೆ ಗೋದಾಮಿನ ಈ ಕಟ್ಟಡಕ್ಕೆ ಯಾವುದೇ ವಿದ್ಯುತ್ ಸಂಪರ್ಕ ಇರಲಿಲ್ಲ, ಆದರೂ ಕೂಡ ಯಾವ ಕಾರಣಕ್ಕಾಗಿ ಅಗ್ನಿ ಅವಘಡ ಸಂಭವಿಸಿದೆ ಎನ್ನುವುದು ಇನ್ನೂ ನಿಗೂಢವಾಗಿದೆ. ಮಾಲೀಕರು ಹೇಳುವ ಪ್ರಕಾರ ಉಷ್ಣತೆ ಅಧಿಕಗೊಂಡು ರಾಸಾಯನಿಕ ಪ್ರಕ್ರಿಯೆಗೊಳಪಟ್ಟು ಅಗ್ನಿ ದುರಂತ ಸಂಭವಿಸುವ ಸಾಧ್ಯತೆ ಎದೆಯೆನುತ್ತಾರೆ.
ಅಗ್ನಿಶಾಮಕ ದೌಡು
ಘಟನೆ ನಡೆಯುತ್ತಿದ್ದಂತೆಯೇ ಈ ಭಾಗದಲ್ಲಿದ್ದ ಮಾಜಿ ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್ ಕುಂದಾಪುರ ಅಗ್ನಿಶಾಮಕ ಠಾಣೆಗೆ ಫೋನಾಯಿಸಿದ್ದು ಕೂಡಲೇ ಸ್ಥಳಕ್ಕಾಗಮಿಸಿದ ಎರಡು ಅಗ್ನಿಶಾಮಕ ದಳಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು. ಒಟ್ಟು ನಾಲ್ಕು ವಾಹನಗಳ ನೀರು ಹ್ಗಾಯಿಸುವ ಮೂಲಕ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಸಿಬ್ಬಂದಿಗಳು ಶ್ರಮಿಸಿದರು.