ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬರುವ 5 ಜಿಲ್ಲಾ ಪಂಚಾಯತ್ ಮತ್ತು 21 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್ ಕುಮಾರ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕುಂದಾಪುರದ ಶಾಸಕ ಶ್ರೀನಿವಾಸ ಶೆಟ್ಟಿಯವರ ಬೆಂಬಲ ಯಾರಿಗೆ ಎಂಬ ಪ್ರಶ್ನೆಗೆ ಹಾಲಾಡಿಯವರು ಬಿಜೆಪಿ ಪರ ಮತಯಾಚನೆ ಮಾಡುತ್ತಿರುವುದು ಎಲ್ಲಾ ಗೊಂದಲಗಳಿಗೂ ತೆರೆಬಿದ್ದಿದೆ. ಅದರೊಂದಿಗೆ ವಿಶೇಷವಾಗಿ ಜಯಪ್ರಕಾಶ ಹೆಗ್ಡೆಯವರ ಬೆಂಬಲ ಬಿಜೆಪಿಗೆ ದೊರಕಿರುವುದು ನಮ್ಮ ಪಕ್ಷಕ್ಕೆ ಈ ಚುನಾವಣೆಯಲ್ಲಿ ಆನೆಬಲ ದೊರಕಿದಂತಾಗಿದೆ. ಕಾಂಗ್ರೆಸಿನಿಂದ ಮುನಿಸಿಕೊಂಡಿರುವ ಹೆಗ್ಡೆಯವರು ಮತ್ತು ಅವರ ಬೆಂಬಲಿಗರೆಲ್ಲರೂ ಬೇಷರತ್ತಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕಣದಲ್ಲಿ ಮತಯಾಚನೆ ಮಾಡುತ್ತಿರುವುದರಿಂದ ಕಾಂಗ್ರೆಸ್ನ ಎಲ್ಲಾ ಅಭ್ಯರ್ಥಿಗಳು ಸೋಲನ್ನು ಕಾಣಲಿದ್ದಾರೆ ಎಂಬ ವಿಶ್ವಾಸವಿದೆ. ಈ ಕಾರಣದಿಂದಾಗಿ ನಮ್ಮ ಅಭ್ಯರ್ಥಿಗಳು ಅತ್ಯದಿಕ ಮತದಿಂದ ಗೆಲ್ಲುವುದರ ಜೊತೆಗೆ ಉಡುಪಿ ಜಿ.ಪಂ ಹಾಗೂ ಕುಂದಾಪುರ, ಉಡುಪಿ ಮತ್ತು ಕಾರ್ಕಳ ತಾ.ಪಂ ಗಳಲ್ಲಿ ಬಹುಮತವನ್ನು ಸಾಧಿಸುವುದರೊಂದಿಗೆ ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ಅಭಿಪ್ರಾಯ ಪಟ್ಟಿರುತ್ತಾರೆ.
ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಕುಂದಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಸಜ್ಜನ ಮತದಾರ ಬಂಧುಗಳು ಅತ್ಯಧಿಕ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೆಳ್ವೆ ವಸಂತ ಕುಮಾರ್ ಶೆಟ್ಟಿ ಹಾಗೂ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮೇರ್ಡಿ ಸತೀಶ್ ಹೆಗ್ಡೆ ವಿನಂತಿಸಿರುತ್ತಾರೆ.