(File photo) ಬಂಟ್ವಾಳ, ಜ. 12: ಫರಂಗಿಪೆಟೆ ಜಂಕ್ಷನ್ನಲ್ಲಿ ಹೆದ್ದಾರಿ ಜಾಗವನ್ನು ಆಕ್ರಮಿಸಿ ನಿರ್ಮಾಣ ಮಾಡಿದ್ದ ವಿವಿಧ ಅಂಗಡಿಗಳನ್ನು ಮಂಗಳವಾರ ಸಂಜೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದರು.
ಪುದು ಗ್ರಾಮದ ಫರಂಗಿಪೇಟೆ ಜಂಕ್ಷನ್ನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಹೆದ್ದಾರಿ ಜಾಗವನ್ನು ಆಕ್ರಮಿಸಿ ಗೂಡಂಗಡಿ, ಫಾಸ್ಟ್ಫುಡ್, ಹೊಟೇಲ್, ಬಟ್ಟೆ ಅಂಗಡಿ, ಹಣ್ಣು ಹಂಪಲು ಮಾರಲಾಗುತ್ತಿದ್ದು, ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಸಾರ್ವಜಿಕರಿಗೆ ನಡೆದಾಡಲು ಇದ್ದ ಜಾಗದಲ್ಲಿ ಸಣ್ಣ ಪುಟ್ಟ ಗೂಡುಗಳನ್ನು ನಿರ್ಮಾಣ ಮಾಡಿ ವ್ಯಾಪಾರ ನಡೆಸಲಾಗುತ್ತಿತ್ತು. ಗ್ರಾಹಕರು ಖರೀದಿಗಾಗಿ ಎಲ್ಲಿಂದೆಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದರಿಂದ ಪಾದಾಚಾರಿಗಳಿಗೆ ನಡೆದಾಡಲು ಜಾಗ ಇರುತ್ತಿರಲಿಲ್ಲ. ಈ ಬಗ್ಗೆ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಎಲ್ಲ ಅಕ್ರಮ ವ್ಯಾಪಾರಿಗಳಿಗೆ ಹೆದ್ದಾರಿ ಇಲಾಖೆ ನೋಟಿಸ್ ನೀಡಿ, ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿತ್ತು. ಅಲ್ಲದೆ ಎರಡು ಮೂರು ಬಾರಿ ಎಚ್ಚರಿಕೆಯನ್ನೂ ನೀಡಿತ್ತು. ಆದರೂ ಒತ್ತುವರಿ ತೆರವುಗೊಳಿಸಿದ್ದರಿಂದ ಇಂದು ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಅಧಿಕಾರಿಗಳು ತೆರವಿಗೆ ಮುಂದಾಗುತ್ತಿದ್ದಂತೆ ವ್ಯಾಪಾರಿಗಳು ಸ್ವಯಂ ಆಗಿ ತೆರವು ಗೊಳಿಸಿದರು.
ಅಲ್ಲದೆ ಬಸ್ಸ್ಟಾಂಡ್ ಎಲ್ಲಿಂದೆಲ್ಲೆಡೆ ನಿಲ್ಲಿಸಿದ್ದ ಸ್ಕೂಟರ್ಗಳನ್ನು ಕೂಡಾ ಲಾರಿಗೆ ತುಂಬಿಸಿ ಕೊಂಡೊಯ್ಯಲಾಯಿತು.
ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಗ್ರಾಮಾಂತರ ಠಾಣೆ ಉಪ ನಿರೀಕ್ಷ ರಕ್ಷಿತ್ ಎ.ಕೆ. ನೇತೃತ್ವಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಕೆಲವರು ರಕ್ಷಿತ್ ಅವರೊಂದಿಗೆ ಆಕ್ಷೇಪ ವ್ಯಕ್ತಪಡಿಸಿದರೂ, ಮುನಿಯದ ಅವರು ಕಾರ್ಯಾಚರಣೆಯನ್ನು ಮುಂದುವರಿಸಿದರು.
ಎರಡು ದಿನದ ಗಡುವು
ಫರಂಗಿಪೇಟೆ ಸಹಿತ ವಿವಿಧ ಜಂಕ್ಷನ್ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಆಕ್ರಮಿಸಿ ಗೂಡಂಗಡಿ, ಗುಜಿರಿ ಅಂಗಡಿ, ಕಟ್ಟಡ ನಿರ್ಮಾಣದ ಸಾಮಾಗ್ರಿಗಳು, ಹಣ್ಣುಹಂಪಲು ಮಾರಾಟ, ಫಾಸ್ಟ್ ಫುಡ್ ಅಂಗಡಿಗಳನ್ನು ಎರಡು ದಿನಗಳಲ್ಲಿ ವ್ಯಾಪಾರಿಗಳು ಸ್ವಯಂ ಆಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಪೊಲೀಸರ ನೆರವಿನೊಂದಿಗೆ ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.