ಕನ್ನಡ ವಾರ್ತೆಗಳು

ಸಿ.ಸಿ ಟಿ.ವಿ ಅಳವಡಿಸಿ ಸುರಕ್ಷತೆ ಹೆಚ್ಚಿಸಿ : ಎ.ಬಿ ಇಬ್ರಾಹಿಂ

Pinterest LinkedIn Tumblr

Dc_press_meet_1

ಮ೦ಗಳೂರು ಡಿ.07: ಹೆಚ್ಚುತ್ತಿರುವ ಕಳುವು , ಅಪರಾಧಗಳು , ಅತ್ಯಾಚಾರ ಪ್ರಕರಣಗಳು, ಅಪರಿಚಿತರ ಆಗಮನ, ಹೋರಾಟ, ಜಗಳ, ಹೊಡೆದಾಟ ಇನ್ನೂ ಮುಂತಾದ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ದೃಷ್ಠಿಯಿಂದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸರಕಾರಿ ಕಚೇರಿಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣ, ಮೀನುಗಾರಿಕೆ ಬಂದರುಗಳು (ದಕ್ಕೆ), ಮಾರುಕಟ್ಟೆಗಳು, ಸಿನಿಮಾ ಮಂದಿರಗಳು ಸೇರಿದಂತೆ ವಿವಿಧ ಸಂಸ್ಥೆಗಳು ತಮ್ಮಲ್ಲಿ ಸಿಸಿ ಕ್ಯಾಮರಾಗಳನ್ನು ಆಧ್ಯತೆಯ ಮೇರೆಗೆ ಅಳವಡಿಸಿಕೊಳ್ಳುವಂತೆ ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ರವರು ಸೂಚಿಸಿದ್ದಾರೆ.

ಅವರು ಇಂದು ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಬಹುತೇಕ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಹಾಗೂ ಬ್ಯಾಂಕಿಂಗ್ ಸಂಸ್ಥೆಗಳು ಮುಖ್ಯ ಮಾರ್ಗಗಳಲ್ಲೇ ಇರುವುದರಿಂದ ಅವುಗಳ ಸುರಕ್ಷತೆಗಾಗಿ ಅಗತ್ಯಕ್ಕೆ ತಕ್ಕಷ್ಟು ಸಿಸಿ. ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಸುಮಾರು 500 ರಷ್ಟು ಮುಜರಾಯಿ ಆಡಳಿತಕ್ಕೊಳಪಟ್ಟ ದೇವಾಲಯಗಳಿದ್ದು ಇವುಗಳಲ್ಲಿ ಪ್ರವರ್ಗ ಎ ಗೆ ಸೇರಿದ ಅಧಿಕ ವರಮಾನವಿರುವ 40   ದೇವಾಲಯಗಳಿದ್ದು ಈ ಎಲ್ಲಾ ದೇವಾಲಯಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ, ಪ್ರವರ್ಗ ಬಿ ಗೆ ಸೇರಿದ 25 ದೇವಾಲಯಗಳಲ್ಲಿ 23 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಪ್ರವರ್ಗ ಸಿ ಗೆ ಸೇರಿದ 427 ದೇವಾಲಯಗಳಲ್ಲಿ 162 ಕಡೆಗಳಲ್ಲಿ ಮಾತ್ರ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಎಲ್ಲಾ ಸಿಸಿ ಕ್ಯಾಮರಾಗಳ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಬಗ್ಗೆ ಪರಿಶೀಲಿಸಲು ಸಭೆಯಲ್ಲಿ ಹಾಜರಿದ್ದ ಪೋಲೀಸ್ ಅಧಿಕಾರಿಗಳಿಗೆ ತಿಳಿಸಿದರು.

ಇದೇ ರೀತಿ ದ.ಕ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ 605 ಮಸೀದಿಗಳು ಇದ್ದು ಇವುಗಳಲ್ಲಿ ಅಧಿಕ ಆಧಾಯ ತರುವ 95 ಪ್ರಮುಖ ಮಸೀದಿಗಳು ಸೇರಿದ್ದರೂ ಬೆರಳಣಿಕೆಯಷ್ಟು ಮಸೀದಿಗಳನ್ನು ಬಿಟ್ಟರೆ ಬೇರೆ ಯಾವುದೇ ವಕ್ಫ್ ಮಂಡಳಿಯ ಮಸೀದಿಗಳಲ್ಲಿ ಇಲ್ಲಿಯ ತನಕ ಸಿಸಿ ಕ್ಯಾಮರಾಗಳನ್ನು ಅಳವಡಿಸದೇ ಇರುವುದು ಅಸಮಾಧಾನ ತಂದಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಮಂಡಳಿಯು ಕಾರ್ಯಪ್ರವೃತ್ತವಾಗಿ ಸಿಸಿ ಕ್ಯಾಮರಾವನ್ನು ಅಳವಡಿಸುವಂತೆ ಸಭೆಯಲ್ಲಿ ಹಾಜರಿದ್ದ ವಕ್ಫ್ ಮಂಡಳಿಯ ಕಾರ್ಯದರ್ಶಿಗೆ ಸೂಚಿಸಿದರು.

ದ.ಕ ಜಿಲ್ಲೆಯಲ್ಲಿ ಒಟ್ಟು 1975 ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಶಾಲೆಗಳಿದ್ದು ಇವುಗಳಲ್ಲಿ 620 ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಉಳಿದೆಡೆ ಎಲ್ಲಾ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಡಿ.ಡಿ.ಪಿ.ಐ ವಾಲ್ಟರ್ ಡಿ. ಮೆಲ್ಲೋ ಅವರು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ451 ಬಾರ್‌ಗಳು (ಮಧ್ಯದಂಗಡಿ) ಇದ್ದು ಇವುಗಳಲ್ಲಿ 440 ರಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅಭಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ್ ಅವರು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 147 ಪೆಟ್ರೋಲ್ ಬಂಕ್ ಗಳಿದ್ದು 76 ಬಂಕ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ, 37 ಗ್ಯಾಸ್ ಏಜನ್ಸಿಗಳಲ್ಲಿ 18 ಏಜನ್ಸಿಗಳು ತಮ್ಮ ಕಚೇರಿಗೆ ಸಿಸಿ ಕ್ಯಾಮರಾ ಅಳವಡಿಸಿರುವುದಾಗಿ ಆಹಾರ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿರುವ 53 ಪ್ರಥಮ ದರ್ಜೆಕಾಲೇಜುಗಳಲ್ಲಿ 40 ಕಾಲೇಜುಗಳಲ್ಲಿ ಸಿಸಿ ಕ್ಯಾಮರಾ‌ಅಳವಡಿಸಲಾಗಿದೆ ಎಂದು ಸಂಬಂದಿಸಿದ ಅಧಿಕಾರಿ ಸಭೆಗೆ ತಿಳಿಸಿದರು.

ಮಂಗಳೂರು ನಗರದ ಕೇಂದ್ರ ಮಾರುಕಟ್ಟೆ, ದಕ್ಕೆ, ಕದ್ರಿಪಾರ್ಕ್ ಹಾಗೂ ಇತರೆ ಪಾರ್ಕ್‌ಗಳು ಸರ್ವಿಸ್ ಬಸ್ ನಿಲ್ದಾಣ, ಎಲ್ಲಾ ಪ್ರಮುಖ ವೃತ್ತಗಳಲ್ಲಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮಾರಾಗಳನ್ನು ಕೂಡಲೆ ಅಳವಡಿಸಲು ಸಭೆಯಲ್ಲಿ ಹಾಜರಿದ್ದ ನಗರಪಾಲಿಕೆ ಆಯುಕ್ತರಾದ ಗೋಪಾಲಕೃಷ್ಣ ಅವರಿಗೆ ಜಿಲ್ಲಾಧಿಕಾರಿ ಹಾಗೂ ಪೋಲೀಸ್ ಅಧೀಕ್ಷಕರಾದ ಶರಣಪ್ಪ ಅವರು ತಿಳಿಸಿದರು.

ಮಂಗಳೂರು ನಗರದಲ್ಲಿ ಅಳವಡಿಸಲು ಸೂಚಿಸಿರುವಂತೆ ಜಿಲ್ಲೆಯ ಇತರ ತಾಲೂಕು ಕೇಂದ್ರಗಳಲ್ಲಿ ಸಹ ಅಳವಡಿಸಲು ಪೋಲೀಸ್ ಅಧೀಕ್ಷಕರಾದ ಶರಣಪ್ಪ ಅವರು ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಉಪ ಪೋಲೀಸ್ ಆಯುಕ್ತ ಶಾಂತಾರಾಮ್ ಮುಂತಾದವರು ಭಾಗವಹಿಸಿದರು.

Write A Comment