ಉಡುಪಿ: ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್ ಪಕ್ಷದಲ್ಲಿ ಈಗ ಬಂಡಾಯ ಬಿಸಿ ಆರಂಭಗೊಂಡಿದೆ. ಕಾಂಗ್ರೆಸ್ ಹಿರಿಯ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಟಿಕೇಟ್ ನೀಡಿದ ಬೆನ್ನಲ್ಲೇ ಈ ಅಸಮಾಧಾನ ಸ್ಪೋಟಗೊಂಡಿದ್ದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೇ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದಲ್ಲಿ ಎರಡು ಅಭ್ಯರ್ಥಿಗಳು ನಿಲ್ಲಲು ಅವಕಾಶಗಳಿದ್ದರೂ ಒಬ್ಬರೇ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ನಾಟಕೀಯ ಬೆಳವಣಿಗೆಯಲ್ಲಿ ಟಿಕೇಟ್ ಬೇಡವೆಂದೂ ತಾನೂ ಈ ಬಾರೀ ಸ್ಪರ್ಧಿಸುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದ ಹಿರಿಯ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಈ ಬಾರಿ ಟಿಕೇಟ್ ನೀಡುವ ಮೂಲಕ ಕಾಂಗ್ರೆಸ್ ಭಿನ್ನಮತ ಸ್ರಷ್ಟಿಯಾಗಲು ಎಡೆಮಾಡಿಕೊಟ್ಟಿದೆ. ಮೂಲಗಳ ಪ್ರಕಾರ ಸೋಮವಾರ ಹೆಗ್ಡೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಇನ್ನು ಹೆಗ್ಡೆ ಆಕಾಂಕ್ಷಿಯಾಗಿರುವ ಬೆನ್ನಲ್ಲೇ ಅವರಿಗೆ ಉತ್ತಮ ಬೆಂಬಲ ಸಿಕ್ಕಿದ್ದು ಕಾರ್ಯಕರ್ತರು ಜೆ.ಪಿ. ಹೆಗ್ಡೆ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಹೆಗ್ಡೆ ಅಸಮಾಧಾನ: ಪ್ರತಾಪಚಂದ್ರ ಶೆಟ್ಟರು ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆ ತಾನೂ ಆಕಾಂಕ್ಷಿಯಾಗಿದ್ದು ಪಕ್ಷ ಟಿಕೇಟ್ ನೀಡದಿರುವುದು ಬೇಸರ ಮೂಡಿಸಿದೆ. ನಿಷ್ಟಾವಂತರಾಗಿರುವ ಯಾರಿಗೇ ಟಿಕೇಟ್ ನೀಡಿದರೂ ತಾನೂ ನಾಮಪತ್ರ ಹಿಂಪಡೆಯುವುದಾಗಿಯೂ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಪಕ್ಷದಲ್ಲಿ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಸೂಕ್ತ ಮಾತುಕತೆ ಮೂಲಕ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಸಿ.ಎಂ. ಸಿದ್ದರಾಮಯ್ಯ ಹೇಳಿದ್ದಾರೆ.