ಮ೦ಗಳೂರು, ಡಿ.04 : ಇಂದು ನಮ್ಮಲ್ಲಿ ಮಹಿಳೆಯರ ಹಾಗೂ ಪುರುಷರ ಅನುಪಾತದಲ್ಲಿ ಬಹಳಷ್ಟು ವ್ಯತ್ಯಾಸಗಳಿರುವುದಕ್ಕೆ ಮುಖ್ಯ ಕಾರಣ ಹೆಣ್ಣು ಬ್ರೂಣ ಹತ್ಯೆ,ಆದ್ದರಿಂದ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವನ್ನು ಹೊಂದಿ ಅವರಿಗೆ ಸರಿ ಎನಿಸಿದ್ದನ್ನು ಅವರು ಆಯ್ಕೆ ಮಾಡಿಕೊಳ್ಳಬೇಕೆಂದು 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ಮಹಿಳೆಯರಿಗೆ ಕರೆ ನೀಡಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಹೆಣ್ಣು ಮಗುವನ್ನು ಉಳಿಸಿ ಆಂದೋಲನದ ಅಂಗವಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ-1994 ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸುಶಿಕ್ಷಿತರಾಗಬೇಕು, ಆಗ ಮಾತ್ರ ಅವರೂ ಪುರುಷರಂತೆ ಸಮಾನವಾಗಿ ಬದುಕಲು ಸಾಧ್ಯ ಎಂದು ತಿಳಿಸಿದ ಅವರು ಭ್ರೂಣದಲ್ಲಿರುವ ಮಗುವಿನ ಲಿಂಗ ಪತ್ತೆ ಕಾನೂನು ಬಾಹಿರವಾದ ಕೃತ್ಯ ಆದರೆ ೬ತಿಂಗಳ ಒಳಗಿನ ಗರ್ಭಾವಸ್ಥೆಯ ಮಗುವಿಗೆ ಗರ್ಭದಲ್ಲೆ ಏನಾದರೂ ತುಂಬಾ ತೊಂದರೆ ಇದ್ದಲ್ಲಿ ಮಾತ್ರ ಮಹಿಳೆಯ ಒಪ್ಪಿಗೆ ವೈದ್ಯರ ಸಲಹೆ ಮೇರೆಗೆ ಮಹಿಳೆಯ ವಯಸ್ಸು, ದೇಹಸ್ಥಿತಿ ಪರಿಗಣಿಸಿ ಗರ್ಭಪಾತ ಮಾಡಲು ಕಾನೂನಿಲ್ಲಿ ಅವಕಾಶವಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಪಿ.ಚೆಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಈ ಸಂದರ್ಭದಲ್ಲಿ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ಸ್ವಾಗತಿಸಿದರು.
ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇದ ಕಾಯ್ದೆ ಕುರಿತಂತೆ ಲೇಡಿಗೋಷನ್ ಆಸ್ಪತ್ರೆ ಸ್ತ್ರೀ ರೋಗ ತಜ್ಞರಾದ ಡಾ: ದುರ್ಗಾಪ್ರಸಾದ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಗಣೇಶ್ ಮತ್ತು ಸಮಜಸೇವಾ ಕಾರ್ಯಕರ್ತೆ ಡಾ. ರಶ್ಮಿ ಕ್ರಮವಾಗಿ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ-1994 ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ- ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಲಿಂಗ ತಾರತಮ್ಯದ ಪ್ರಭಾವ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.