ಮೂಡಬಿದಿರೆ, ನ.30: ನುಡಿಸಿರಿಯಂತ ಸಮ್ಮೇಳನಗಳು ನಾಡು ನುಡಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಂತಾಗಬೇಕು ಎಂದು ಆಳ್ವಾಸ್ ನುಡಿಸಿರಿ-2015ರ ಸಮ್ಮೇಳಾನಾಧ್ಯಕ್ಷ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಹೇಳಿದರು.
ಮೂಡುಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ರತ್ನಾಕರವರ್ಣಿ ವೇದಿಕೆ, ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಕರ್ನಾಟಕದ ಹೊಸತನದ ಹುಡುಕಾಟದ ಪರಿಕಲ್ಪನೆಯೊಂದಿಗೆ ನಡೆದ ನಾಲ್ಕು ದಿನಗಳ ಆಳ್ವಾಸ್ ನುಡಿಸಿರಿ-2015 ಸಮಾರೋಪ ಮತ್ತು ‘ನುಡಿಸಿರಿ’ ಪ್ರಶಸ್ತಿ ಪ್ರದಾನದ ಸಮಾರಂಭದ ಸಮ್ಮೇಳನಾಧ್ಯಕ್ಷರಾಗಿ ಅವರು ಮಾತನಾಡುತ್ತಿದ್ದರು.
ನಾಡು ಎದುರಿಸುವ ಸಮಸ್ಯೆಗಳ ಬಗ್ಗೆ, ನುಡಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ, ಸಂಸ್ಕೃತಿಗಳ ಬಗ್ಗೆ ನುಡಿಸಿರಿಯ ಹಲವು ವೇದಿಕೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ಕಾರ್ಯಕ್ರಮಗಳು ನಡೆದಿದ್ದು, ಶಿಸ್ತುಬದ್ಧ್ದವಾಗಿ ಉತ್ಕೃಷ್ಟವಾಗಿ ನಡೆದ ಈ ಸಮ್ಮೇಳನ ‘ಸಿರಿಮುಡಿ’ ಎಂದವರು ಅಭಿಪ್ರಾಯಪಟ್ಟರು.
ನುಡಿಸಿರಿ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ, ಡಾ. ಸುಮತೀಂದ್ರ ನಾಡಿಗ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಆರ್.ಕೆ.ಪದ್ಮನಾಭ, ಬಿ.ಎನ್.ಸುಮಿತ್ರಾಬಾಯಿ, ಈಶ್ವರ ದೈತೋಟ, ಲೀಲಾವತಿ ಬೈಪಡಿತ್ತಾಯ, ವರ್ತೂರು ನಾರಾಯಣ ರೆಡ್ಡಿ ಶಿಲ್ಪಿ ಹೊನ್ನಪ್ಪಾಚಾರ್, ಸೈಯದ್ ಸಲ್ಲಾವುದ್ದೀನ್ ಪಾಷಾ ಅವರಿಗೆ ‘ಆಳ್ವಾಸ್ ನುಡಿಸಿರಿ’ ಪ್ರಶಸ್ತಿಯನ್ನು ಸಮ್ಮೇಳನದ ರೂವಾರಿ ಡಾ.ಎಂ.ಮೋಹನ್ ಆಳ್ವ ಪ್ರದಾನ ಮಾಡಿದರು.
ಪ್ರಶಸ್ತಿಯು 25 ಸಾವಿರ ನಗದು, ಸ್ಮರಣಿಕೆ, ಶಾಲು, ಹಾರ, ಹಣ್ಣು ಹಂಪಲುಗಳನ್ನು ಒಳಗೊಂಡಿತ್ತು. ಇದೇ ಸಂದರ್ಭ ಆಳ್ವಾಸ್ ಪತ್ರಿಕೋದ್ಯಮದ ವಿದ್ಯಾರ್ಥಿಗಳು ರೂಪಿಸಿದ ಸ್ಮರಣ ಸಂಚಿಕೆ ‘ಆಳ್ವಾಸ್ ಟುಡೆ’ಯನ್ನು ಡಾ.ಮೋಹನ್ ಆಳ್ವ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಸಚಿವ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ಡಾ.ಮೋಹನ್ ಆಳ್ವ ಸ್ವಾಗತಿಸಿದರು. ಅಂಡಾರು ಗುಣಪಾಲ ಹೆಗ್ಡೆ ವಂದಿಸಿದರು.ಕಿದೂರು ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ನುಡಿಸಿರಿ ಪ್ರಶಸ್ತಿ ಪುರಸ್ಕೃತರನ್ನು ಆಕರ್ಷಕ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.



























