ಕುಂದಾಪುರ: ಕೋಟೇಶ್ವರ ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ರಿಕ್ಷಾವೊಂದು ಹಿಂಬದಿಯಿಂದ ಸೈಕಲ್ ಸವಾರನಿಗೆ ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ರಸ್ತೆಯಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರದ ಅಂಕದಕಟ್ಟೆ ಡಿವೈಡರ್ ಬಳಿ ಭಾನುವಾರ ಸಂಜೆ ನಡೆದಿದೆ.
ಅಂಕದಕಟ್ಟೆಯ ನಿವಾಸಿ ರಮಾನಂದ ಹೆಬ್ಬಾರ್ (56) ಅಪಘಾತದಲ್ಲಿ ಮೃತಪಟ್ಟ ಸೈಕಲ್ ಸವಾರ.
ಘಟನೆ ವಿವರ: ಹಲವು ವರ್ಷಗಳಿಂದ ಅಂಕದಕಟ್ಟೆ ಸಮೀಪ ಹೆಬ್ಬಾರ್ ಜನರಲ್ ಸ್ಟೋರ್ ಎಂಬ ದಿನಸಿ ಅಂಗಡಿ ನಡೆಸುತ್ತಿದ್ದ ರಮಾನಂದ ಹೆಬ್ಬಾರ್ ಅವರು ನಿತ್ಯದಂತೆ ಸಮೀಪದ ಅಂಗಡಿಯಿಂದ ಹಾಲು ಪ್ಯಾಕೇಟುಗಳನ್ನು ಖರೀದಿಸಿ ಚೀಲಗಳಲ್ಲಿ ತುಂಬಿಸಿಕೊಂಡು ಸೈಕಲಿನಲ್ಲಿ ತನ್ನ ಅಂಗಡಿಗೆ ಸಾಗುತ್ತಿದ್ದರು. ಇದೇ ವೇಳೆ ಅಂಕದಕಟ್ಟೆ ಡಿವೈಡರ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಕೋಟೇಶ್ವರ ಕಡೆಯಿಂದ ವೇಗವಾಗಿ ಬಂದ ರಿಕ್ಷಾ ಸೈಕಲಿಗೆ ಡಿಕ್ಕಿಯಾಗಿದೆ. ಇದೇ ವೇಳೆ ರಸ್ತೆಗೆ ಬಿದ್ದ ರಮಾನಂದ್ ಅವರ ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿದೆ. ಆದರೂ ನೆರೆದ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಾಗಲೇ ರಮಾನಂದ್ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ಪಿ.ಎಂ. ದಿವಾಕರ್, ಎಸ್.ಐ. ನಾಸೀರ ಹುಸೇನ್, ಸಂಚಾರಿ ಠಾಣೆ ಉಪನಿರೀಕ್ಷಕ ದೇವೇಂದ್ರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್ ಗೊಂದಲ: ಈ ಅಪಘಾತ ನಡೆದ ಸ್ಥಳದಲ್ಲಿ ಗೊಂದಲವನ್ನುಂಟು ಮಾಡುವ ಅವೈಜ್ಞಾನಿಕ ಡಿವೈಡರ್ ಅಪಘಾತಗಳಿಗೆ ಕಾರಣವಾಗಿದೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಒಂದೆರಡು ತಿಂಗಳಿನ ಹಿಂದಷ್ಟೇ ಇದೇ ಡಿವೈಡರ್ ಬಳಿ ಸೈಕಲ್ ಸವಾರ ವಿದ್ಯಾರ್ಥಿಯೋರ್ವ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ. ಇಂತಹ ಹಲವು ಅವೈಜ್ಞಾನಿಕ ಹಾಗೂ ಹೆದ್ದಾರಿ ಪ್ರಾಧಿಕಾರದ ಯಾವುದೇ ನಕಾಶೆಯಲ್ಲೂ ಇಲ್ಲದ ಡಿವೈಡರ್ ತಾಲೂಕಿನಾದ್ಯಂತ ಹಲವೆಡೆ ಇದ್ದು ಇಂತಹ ಡಿವೈಡರ್ ನಿರ್ಮಿಸಿ ಇತರರ ಪ್ರಾಣಕ್ಕೆ ಕುತ್ತು ಮಾಡುವ ಬಗ್ಗೆ ಸಂಬಂದಪಟ್ಟವರು ಹಾಗೂ ಪೊಲೀಸ್ ಇಲಾಖೆ ಗಮನಹರಿಸಬೇಕು. ಅಲ್ಲದೇ ಕೂಡಲೇ ಅವೈಜ್ಞಾನಿಕ ಡಿವೈಡರ್ ಮುಚ್ಚಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.