ಕುಂದಾಪುರ: ಬೈಂದೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದ ಪ್ರತ್ಯೇಕ ಅಪಘಾತಗಳೆರಡರಲ್ಲಿ ಬೈಕ್ ಸವಾರರಿಬ್ಬರು ಧಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಲಾರಿ ಮತ್ತು ಬೈಕ್ ಅಪಘಾತ ; ಬೈಕ್ ಸವಾರ ಸಾವು
ಬೈಂದೂರಿನ ಹೊಸ ಬಸ್ ಸ್ಟಾಂಡ್ ಜಂಕ್ಷನ್ ಬಳಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ 12.00 ಗಂಟೆಗೆ ನಡೆದಿದೆ.
ಮೃತ ಸವಾರ ನಾವುಂದದ ನಿವಾಸಿ ಗೋಪಾಲ ಪೂಜಾರಿ (30).
ಭಟ್ಕಳದಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಲಾರಿಯ ಹಿಂಭಾಗಕ್ಕೆ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ಬೈಕ್ ಲಾರಿಯ ಮಧ್ಯ ಭಾಗಕ್ಕೆ ಡಿಕ್ಕಿ ಸಂಭವಿಸಿದ್ದರಿಂದ ಬೈಕ್ ಸವಾರ ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿದ್ದು. ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪರಿಶೀಲಿಸಿದರು.
ಬೈಕ್-ಟಿಪ್ಪರ್ ಡಿಕ್ಕಿ-ಸಾವು
ಬೈಂದೂರಿನ ನಾಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತ ಸವಾರನನ್ನು ಜನಾರ್ಧನ್ ಆಚಾರ್ಯ ಪಡುವರಿ (47 ) ಎಂದು ಗುರುತಿಸಲಾಗಿದೆ. ಇವರು ಪ್ರಸ್ತುತ ವಸ್ರೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಬೈಂದೂರು ಕಡೆ ಬರುತ್ತಿದ್ದ ಬೈಕ್ ಗೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಗಳ ಓವರ್-ಟೇಕ್ ಬರದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು 2 ಗಂಡು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಒಂದು ಅಪಘಾತ ಸಂಭವಿಸಿ ಕೇವಲ ಅರ್ಧ ಗಂಟೆಗಳ ಬಳಿಕ ಅದೇ ವ್ಯಾಪ್ತಿಯಲ್ಲಿ ಇನ್ನೊಂದು ಭೀಕರ ಅಪಘಾತ ಸಂಭವಿಸಿದೆ. ಎರಡು ಅಪಘಾತಗಳ ತರುವಾಯ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಎರಡು ಅಪಘಾತಗಳ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.