ಬೆಂಗಳೂರು, ನ.21: ತನ್ನ ಐಷರಾಮಿ ಜೀವನದ ಮೂಲಕವೇ ಬಹುಬೇಗನೆ ವಿಶ್ವದ ಗಮನ ಸೆಳೆದಿದ್ದ ಕಿಂಗ್ ಫಿಷರ್ ಸಂಸ್ಥೆಯ ಮಾಲೀಕ ಹಾಗೂ ಹೆಸರಾಂತ ಉದ್ಯಮಿ ವಿಜಯ್ ಮಲ್ಯ ಇದೀಗ ದಿವಾಳಿಯಾಗಿದ್ದಾರೆ. ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್ಗಳಲ್ಲೊಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಘೋಷಣೆ ಮಾಡಿದಂತೆ ಕಿಂಗ್ಫಿಷರ್ ಮಾಲೀಕ ವಿಜಯ್ ಮಲ್ಯ ಸುಸ್ತಿದಾರ(ಡಿಫಾಲ್ಟರ್) ಎಂದು ಘೋಷಣೆ ಮಾಡಿದೆ.ವಿಜಯ್ ಮಲ್ಯ ಈ ಹಿಂದೆ ತನ್ನ ವಾಣಿಜ್ಯ ವಹಿವಾಟಿಗಾಗಿ ಎಸ್ಬಿಐನಿಂದ ನೂರಾರು ಕೋಟಿ ಸಾಲ ಪಡೆದಿದ್ದರು. ಪಡೆದ ಸಾಲವನ್ನು ಹಿಂದಿರುಗಿಸುವಂತೆ ಬ್ಯಾಂಕ್ ಅನೇಕ ಬಾರಿ ನೋಟೀಸ್ ನೀಡಿತ್ತು. ಈ ನೋಟಿಸ್ಗೆ ಮಲ್ಯ ಕಂಪನಿಯಿಂದ ಯಾವುದೇ ಪ್ರತ್ಯುತ್ತರ ಬಂದಿರಲಿಲ್ಲ.
ಸಾಲ ಹಿಂದಿರುಗಿಸದಿದ್ದರೆ ಕಂಪನಿಯನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಸಹ ಸಾಲ ಮಾತ್ರ ಹಿಂದಿರುಗಿಸಿರಲಿಲ್ಲ. ಇದೀಗ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ಜಾರಿ ನಿರ್ದೇಶನಾಲಯವು ಸಹ ತನಿಖೆ ಕೈಗೆತ್ತಿಕೊಂಡಿದೆ. ಮೇಲ್ನೋಟಕ್ಕೆ ವಿಜಯ್ ಮಲ್ಯ ಒಡೆತನದ ಕಿಂಗ್ಫಿಷರ್ ಬ್ಯಾಂಕ್ಗಳಿಗೆ ಪಂಗನಾಮ ಹಾಕಿರುವುದು ಸಾಬೀತಾಗಿರುವುದರಿಂದ ಅವರನ್ನು ಸುಸ್ತಿದಾರ ಎಂದು ಘೋಷಣೆ ಮಾಡಿದೆ.
ಶುಕ್ರವಾರ ಮುಂಬೈನಲ್ಲಿರುವ ಎಸ್ಬಿಐನ ಕೇಂದ್ರ ಕಚೇರಿಗೆ ಕಿಂಗ್ಫಿಷರ್ ಕಾನೂನು ಸಲಹೆಗಾರರೊಬ್ಬರು ಭೇಟಿ ನೀಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಸಾಲ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ ಹಾಗಾದರೆ ನಿಮ್ಮ ಕಂಪನಿಯನ್ನು ಸುಸ್ತಿದಾರ ಪಟ್ಟಿಗೆ ಸೇರಿಸಬಹುದೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಕಾನೂನು ಸಲಹೆಗಾರರು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಕಿಂಗ್ಫಿಷರ್ ಕಂಪನಿಯನ್ನು ಸುಸ್ತಿದಾರರ ಪಟ್ಟಿಗೆ ಸೇರಿಸಲಾಗಿದೆ. ಒಂದು ಬಾರಿ ಯಾವುದೇ ಬ್ಯಾಂಕ್ ಸುಸ್ತಿದಾರ ಎಂದು ಘೋಷಣೆ ಮಾಡಿದರೆ ಮುಂದೆ ಯಾವುದೇ ಬ್ಯಾಂಕ್ಗಳು ಸಾಲ ನೀಡಲು ಮುಂದೆ ಬರುವುದಿಲ್ಲ.