ಮಂಗಳೂರು,ನ.09 : ನಗರದ ಅತ್ತಾವರ ಪರಿಸರದಲ್ಲಿ ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 26ನೇ ಕಾರ್ಯಕ್ರಮ ಜರುಗಿತು. ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮಿ ವಿವೇಕ ಚೈತನ್ಯಾನಂದಜಿ ಹಾಗೂ ಶ್ರೀ ಸುರೇಶ್ ಬಾಬು ಜಂಟಿಯಾಗಿ 26ನೇ ಅಭಿಯಾನಕ್ಕೆ ಚಾಲನೆ ನೀಡಿದರು.
ಸುಮಾರು 150 ಜನ ಸ್ವಯಂ ಸೇವಕರು ಅತ್ತಾವರ ಕಟ್ಟೆಯ ಸುತ್ತಮುತ್ತಲಿನ ಜಾಗೆಗಳಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು.
3 ಮಾರ್ಗದರ್ಶಿ ಫಲಕಗಳ ನವೀಕರಣ :ಸಾರ್ವಜನಿಕರ ಹಾಗೂ ಹೊಸಬರಿಗೆ ಅನುಕೂಲವಾಗಲೆಂದು ಹಾಕಲಾಗಿದ್ದ ಅತ್ತಾವರ 1ನೇ ಆಡ್ದರಸ್ತೆ. 2ನೇ ಅಡ್ಡರಸ್ತೆ ಮತ್ತು ಎಸ್ಎಲ್ ಮಥಾಯಿಸ್ ರಸ್ತೆಯಲ್ಲಿದ್ದ ಫಲಕಗಳು ಮಾಸಿಹೋಗಿದ್ದವು. ಇಂದು ಆ ಮೂರು ಫಲಕಗಳನ್ನು ಹೊಸದಾಗಿ ಸುಣ್ಣ ಬಣ್ಣ ಬಳಿದು ಸುಂದರವಾಗಿ ಬರೆಯಿಸಲಾಗಿದೆ.
ಸ್ವಚ್ಛತಾಕಾರ್ಯ :ಶ್ರೀ ಸುರೇಶ್ ಶೆಟ್ಟಿ ಹಾಗೂ ಶ್ರೀ ಶುಭೋದಯ ಆಳ್ವ ಇವರುಗಳ ನೇತೃತ್ವದಲ್ಲಿ ಶ್ರೀ ಎಸ್ ಎಂ ಕುಶೆ ಶಾಲೆಯ ವಿದ್ಯಾರ್ಥಿಗಳು ಅತ್ತಾವರಕಟ್ಟೆಯ ಸುತ್ತಮುತ್ತ ಹರಡಿಕೊಂಡಿದ್ದ ತ್ಯಾಜ್ಯವನ್ನು ಶುಚಿಗೊಳಿಸಿದರು. ಇನ್ನೊಂದು ಕಡೆ ಅತ್ತಾವರ ಪರಿಸರದಲ್ಲಿ ಹಿರಿಯ ಸ್ವಯಂ ಸೇವಕರಾದ ಶ್ರೀ ವಿಠಲದಾಸ ಪ್ರಭು ಹಾಗೂ ನಕ್ರೆ ಸುರೇಂದ್ರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರು ಕಟ್ಟೆಯ ಎದುರುಗಡೆಯಿರುವ ಭಾಗವನ್ನು ಹಾಗೂ ಬಿಗ್ಜಜಾರ್ ಎದುರುಗಡೆಯ ರಸ್ತೆಯನ್ನು ಸ್ವಚ್ಛಗೊಳಿಸಿದರು.
ಎಸ್ ಎಂ ಕುಶೆ ಶಾಲೆಯರಸ್ತೆಯಲ್ಲಿ ಸ್ವಯಂ ಅಧ್ಯಾಪಕರರೇ ಖುದ್ದು ಪೊರಕೆ ಹಿಡಿದು ವಿದ್ಯಾರ್ಥಿಗಳೊಂದಿಗೆ ಗುಡಿಸಿದ್ದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿತ್ತು. ಆಶ್ರಮದ ಕಾರ್ಯಕರ್ತರು ಕೊಳೆಕೊಚ್ಚುವ ಯಂತ್ರವನ್ನು ಬಳಸಿ ದಾರಿಯಲ್ಲಿದ್ದ ಹುಲ್ಲನ್ನು ಕತ್ತರಿಸಿದರು. ಬಾಲಕರಿಂದ ಹಿಡಿದು ಹಿರಿಯ ನಾಗರಿಕರು ಭಾಗವಹಿಸಿ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಹಿರಿಯರಿಗೆ ಸಹಾಯಕರಾಗಿ ವಿದ್ಯಾರ್ಥಿಗಳು ತ್ಯಾಜ್ಯ ಸಂಗ್ರಹಿಸಿ ವಾಹನಕ್ಕೆ ತುಂಬಿಸಿ ಸಹಾಯ ಮಾಡುತ್ತಿದ್ದುದು ಸಾರ್ವಜನಿಕರ ಗಮನ ಸೆಳೆಯುತ್ತುತ್ತು.
ಕರಪತ್ರ ಹಂಚಿಜಾಗೃತಿಕಾರ್ಯ :ಸ್ವಚ್ಚತಾ ಕಾರ್ಯದೊಂದಿಗೆ ಅದರ ಬಗ್ಗೆ ಅರಿವನ್ನು ಮೂಡಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಕರಾಗಿ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅತ್ತಾವರ ಮುಖ್ಯ ರಸ್ತೆಗಳಲ್ಲಿರುವ ಅಂಗಡಿಗಳಿಗೆ ಮತ್ತು ಮನೆಮನೆಗೆ ಹೋಗಿ ಸ್ವಚ್ಚತೆಯ ಜಾಗೃತಿಕರ ಪತ್ರ ವಿತರಿಸಿದರು.
ಸಹಕಾರ :ಎಮ್ಎಸ್ ಕುಶೆ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಪ್ರೊ. ಕೆ. ಕೆ ಉಪಾಧ್ಯಾಯ ಹಾಗೂ ಶ್ರೀ ಪ್ರತಿಮಕುಮಾರ ನೇತೃತ್ವದಲ್ಲಿ ಅವರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸ್ಪೂರ್ತಿಯಿಂದ ಅಭಿಯಾನಕ್ಕೆ ಆಗಮಿಸಿ ಸಹಕರಿಸಿದರು. ರಥಬೀದಿ ಸರಕಾರಿ ಪದವಿ ಕಾಲೇಜಿನ ಪ್ರೊ. ಶೇಷಪ್ಪಅಮೀನ್, ಸಹ ಪ್ರಾಧ್ಯಾಪಕ ಶ್ರೀ. ಮಹೇಶ್ ಕೆಬಿ, ಮನಿಕೃಷ್ಣ ಸ್ವಾಮಿಅಕೆಡಮಿಯ ಶ್ರೀ ನಿತ್ಯಾನಂದರಾವ್ ಮತ್ತಿತರು ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಭಾಗವಹಿಸಿದ್ದರು. ಮಹಾಪೋಷಕರಾಗಿ ಈ ಅಭಿಯಾನಕ್ಕೆ ಎಂಆರ್ಪಿಎಲ್ ಸಂಸ್ಥೆ ತನ್ನ ಸಹಕಾರ ನೀಡುತ್ತಿದೆ.