ಉಡುಪಿ: ಟಿಪ್ಪು ಓರ್ವ ಮತಾಂಧ ಮಾತ್ರವಲ್ಲ, ಮಾನವ ದ್ರೋಹಿ ಕೂಡ. ತನ್ನ 15 ವರ್ಷಗಳ ಆಳ್ವಿಕೆ ಅನಂತರ ಆತ ಮರಣ ಹೊಂದಿರದೇ ಇರುತ್ತಿದ್ದರೆ ಇಂದು ಕರ್ನಾಟಕ ಕರಾವಳಿಯಲ್ಲಿ ಕ್ರೈಸ್ತ ಸಮುದಾಯವೇ ಇರುತ್ತಿರಲಿಲ್ಲ ಎಂದು ಮಂಗಳೂ ರಿನ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ನ ರಾಬರ್ಟ್ ರೊಜಾರಿಯೋ ಹೇಳಿದರು.
ಟಿಪ್ಪು ಸುಲ್ತಾನ್ ಜಯಂತಿ ಆಚರಿ ಸುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಶುಕ್ರವಾರ ಉಡುಪಿ ಕ್ಲಾಕ್ ಟವರ್ ಎದುರು ಕರ್ನಾಟಕ ಗೌರವ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಪ್ರತಿಭಟನ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಟಿಪ್ಪುವಿನ ಆಡಳಿತ ಅವಧಿಯಲ್ಲಿ ಕ್ರೈಸ್ತ ಸಮುದಾಯದವರ ನಾಶದ ಕಾಲ. ಟಿಪ್ಪುವಿನ ರಕ್ತ ಸಿಕ್ತ ಕೃತ್ಯಗಳಿಗೆ ಇಂದಿಗೂ ಹಲವು ಸಾಕ್ಷಿಗಳಿದೆ. ಇತಿಹಾಸದಲ್ಲಿ ರಾಷ್ಟ್ರಭಕ್ತಿ, ಶಾಂತಿಯ ಸಂದೇಶ ಸಾರಿದವರನ್ನು ನೆನೆಸಿಕೊಳ್ಳಬೇಕು ಹೊರತು ಟಿಪ್ಪು ಅಂತವರನಲ್ಲ. ಇಂತಹ ಮಾನವ ದ್ರೋಹಿ ಟಿಪ್ಪುವಿನ ಜಯಂತಿ ಮಾಡಲು ಹೊರಟಿರುವ ಸಿದ್ಧರಾಮಯ್ಯ ಸರಕಾರ ರಾಜ್ಯಕ್ಕೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದರು.
ಈ ಸಂದರ್ಭ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಕೂಡ ನ.10ರಂದು ಟಿಪ್ಪುವಿನ ಜನ್ಮದಿನಾಚರಣೆ ನಡೆಸಲು ಹೊರಟಿದೆ. ಇದು ಟಿಪ್ಪು ಜನ್ಮದಿನಾಚರಣೆಯಾಗುವ ಬದಲು ಸರಕಾರದ ಆತ್ಮಹತ್ಯಾ ದಿನ ಎಂದು ಆಚರಿಸುವುದು ಒಳಿತು ಎಂದರು.
ಈ ಸಂದರ್ಭ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಉಪಸ್ಥಿತರಿದ್ದು ರಾಜ್ಯ ಸರಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.