ಕುಂದಾಪುರ: ಸೈಕಲಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವರ ಸೈಕಲಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸೈಕಲ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂಭಾಸಿಯ ಆನೆಗುಡ್ಡೆ ಸ್ವಾಗತಗೋಪುರದ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ವಕ್ವಾಡಿ ನಿವಾಸಿ ಕೃಷ್ಣ ಶೆಟ್ಟಿಗಾರ್ (42) ಅಪಘಾತದಲ್ಲಿ ಮ್ರತಪಟ್ಟ ದುರ್ದೈವಿ.
ಘಟನೆ ವಿವರ: ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಅವರು ಸಂಜೆ ಕೆಲಸ ಮುಗಿಸಿ ತೆಕಟ್ಟೆ ಕಡೆಯಿಂದ ಕುಂಭಾಸಿಯತ್ತ ಸಾಗುತ್ತಿದ ವೇಳೆ ಮಂಗಳೂರಿನಿಂದ ಸಿಂಧಗಿಯತ್ತ ಸಾಗುತ್ತಿದ್ದ ಸರಕಾರಿ ಬಸ್ಸು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಇದರಿಂದ ರಸ್ತೆಗೆ ಬಿದ್ದ ಕ್ರಷ್ಣ ಅವರು ಹಲವು ದೂರಗಳ ಕಾಲ ಎಳೆದೊಯಲ್ಪಟ್ಟರು. ಇದರಿಂದ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬ್ಯಾರಿಗೇಟರ್ ಅವ್ಯವಸ್ಥೆ: ಕುಂಭಾಸಿ ಭಾಗದಲ್ಲಿ ಈ ಹಿಂದೆಯೂ ಹಲವು ಅವಘಡಗಳು ಸಂಭವಿಸಿದ್ದು ಎಚ್ಚೆತ್ತುಕೊಂಡ ಇಲಾಖೆ ಹಲವು ತಿಂಗಳುಗಳಿಂದ ಸ್ಥಳದಲ್ಲಿ ಮೂರು ಬ್ಯಾರಿಗೇಟರ್ ಅಳವಡಿಸಿ ವಾಹನಗಳವೇಗಕ್ಕೆ ಕಡಿವಾಣ ಹಾಕುವ ಬಗ್ಗೆ ಕ್ರಮಕೈಗೊಂಡಿದ್ದರು. ಆದರೇ ರಾತ್ರಿ ವೇಳೆ ಕೆಲವು ಕಿಡಿಗೇಡಿಗಳು ಬ್ಯರಿಗೇಟರನ್ನು ರಸ್ತೆಯಿಂದ ಸರಿಸಿ ಇಡುವ ಕುಕ್ರತ್ಯ ನಡೆಸುತ್ತಿದ್ದಾರೆ. ಅಲ್ಲದೇ ವೇಗವಾಗಿ ಬರುವ ಕೆಲವು ಘನ ವಾಹನಗಳು ಬ್ಯಾರಿಗೇಟರುಗಳಿಗೆ ಡಿಕ್ಕಿ ಹೊಡೆದು ಬೀಳಿಸುತ್ತಿದೆ. ಒಂದೊಮ್ಮೆ ಸುವ್ಯವಸ್ಥಿತವಾಗಿ ಈ ಮೂರು ಬ್ಯಾರಿಗೇಟರ್ ಇದ್ದಲ್ಲಿ ಶುಕ್ರವಾರ ನಡೆದ ಈ ಅವಘಡವನ್ನು ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿಬಂದಿದೆ.
ಸಾವನ್ನಪ್ಪಿದ ಕೃಷ್ಣ ಅವರು ಕಷ್ಟ ಜೀವಿಯಾಗಿದ್ದು ಕೂಲಿ ಕೆಲಸ ಮಾಡಿ ಸಂಸಾರ ನಿರ್ವಹಣೆ ಸಾಗಿಸುತ್ತಿದ್ದವರಾಗಿದ್ದರು. ಪತ್ನಿ ಲೀಲಾವತಿ ಹಾಗೂ ಆರನೇ ತರ್ಗತಿ ಓದುತ್ತಿರುವ ಪುತ್ರಿಯನ್ನು ಅಗಲಿದ್ದಾರೆ.
ಸರಕಾರಿ ಬಸ್ಸು ಚಾಲಕ ಮಲ್ಲಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.