ಉಡುಪಿ: ಉಡುಪಿ ಡಿಸಿಐಬಿ ಪೊಲೀಸರು ಇತ್ತೀಚೆಗೆ ಅಂತರ್ ಜಿಲ್ಲಾ ದೇವಸ್ಥಾನ ಕಳವು ಆರೋಪಿಗಳನ್ನು 28 ಲಕ್ಷ ಸೊತ್ತುಗಳ ಸಮೇತ ಬಂಧಿಸಿದ್ದು ಈ ವೇಳೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಉಡುಪಿ ಡಿ.ಸಿ.ಐ.ಬಿ. ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಾಂದ್ ಪಾಷಾ(23) ಎಂದು ಗುರುತಿಸಲಾಗಿದೆ.
ಆರೋಪಿಯು ಉಡುಪಿ ಜಿಲ್ಲೆಯ ಹರಿಕಂಡಿಕೆ, ಬೆಳ್ಮಣ್ಣು, ಅಡಪಾಡಿ ದೇವಸ್ಥಾನಗಳಲ್ಲಿ ಕಳವು ಮಾಡಿದ್ದವನಾಗಿದ್ದು ಇತ್ತೀಚೆಗೆ ಈತನ ಸಹಚರರು ಪೊಲೀಸ್ ಅತಿಥಿಯಾಗಿದ್ದರು. ಬಂಧಿತನಿಂದ ಕೃತ್ಯಕ್ಕೆ ಬಳಸಿದ ಟಾಟಾ ಇಂಡಿಕಾ ಕಾರು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ಶಿವಮೊಗ್ಗದಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಂತೋಷ ಕುಮಾರ್ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಚಂದ್ರ ಶೇಖರ್ ಎಂ.ಎನ್ ರವರ ಮಾರ್ಗದರ್ಶನದಲ್ಲಿ, ಡಿ.ಸಿ.ಐ.ಬಿ ಇನ್ಸ್ ಪೆಕ್ಟರ್ ಟಿ.ಆರ್ ಜೈಶಂಕರ್ ರವರ ಆದೇಶದಂತೆ ಎಎಸ್ಐ ರೊಸಾರಿಯೊ ಡಿ’ಸೋಜ ಹಾಗೂ ಡಿಸಿಐಬಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.
ಆರೋಪಿಯನ್ನು ಕಾರ್ಕಳ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಲಾಗಿದೆ.