ಮಂಗಳೂರು, ನ.05: ಶಿರಾಡಿ ಘಾಟ್ ರಸ್ತೆಯ ಎರಡನೆ ಹಂತದ ಕಾಂಕ್ರಿಟ್ ಕಾಮಗಾರಿ ಆರಂಭಿಸುವ ಮುನ್ನ ಬಿಸಿಲೆ-ಶಿಶಿಲ ರಸ್ತೆಯ ಡಾಮರು ಕಾಮಗಾರಿಯನ್ನು ಪೂರ್ಣಗೊಳಿ ಸಬೇಕು. ಇದಕ್ಕೆ ಬಿಸಿಲೆ ಘಾಟ್ನ ಅಭಿವೃದ್ಧಿಗೆ ಮೀಸಲಿಟ್ಟ 33 ಕೋ.ರೂ. ಅನುದಾನವನ್ನು ಬಳಸಿಕೊಂಡು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಸದ ನಳಿನ್ಕುಮಾರ್ ಕಟೀಲ್ರವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸರಕಾರದ ಯೋಜನೆಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಶಿರಾಡಿ ಘಾಟ್ ಎರಡನೆ ಹಂತದ ಕಾಮಗಾರಿಯ ಬಗ್ಗೆ ಪ್ರಸ್ತಾಪಿಸಿದ ನಳಿನ್ಕುಮಾರ್ ಕಟೀಲ್, ಎರಡನೆ ಹಂತದ ಕಾಮಗಾರಿಯನ್ನು ಜನವರಿಯಲ್ಲಿ ಆರಂಭಿಸಬೇಕು, ಕಾಮಗಾರಿ ವೇಳೆ ಶಿರಾಡಿ ಘಾಟ್ ಬಂದ್ ಮಾಡುವುದು ಸೂಕ್ತವಲ್ಲ. ಅದರ ಬದಲು ಒಂದು ಬದಿಯಲ್ಲಿ ದುರಸ್ತಿ ಕಾಮಗಾರಿ ನಡೆಸಿದರೆ ಸಮಸ್ಯೆ ಉದ್ಭವಿಸದು ಎಂದರು.
ರಾ. ಹೆದ್ದಾರಿ ಸಮಸ್ಯೆ: ಅಧಿಕಾರಿಗಳಿಗೆ ತರಾಟೆ:
ತೊಕ್ಕೊಟ್ಟಿನಿಂದ ನಂತೂರುವರೆಗಿನ ರಾಷ್ಟ್ರೀಯ ಹೆದಾರಿ ಚತುಷ್ಪಥ ಕಾಮಗಾರಿಯ ವಿಳಂಬದ ಬಗ್ಗೆ ಗುತ್ತಿಗೆದಾರ ಕಂಪೆನಿಯಾಗಿರುವ ‘ನವಯುಗ’ದ ಅಧಿಕಾರಿಯನ್ನು ಸಂಸದರು ತರಾಟೆಗೆ ತೆಗೆದು ಕೊಂಡರು. ಈ ವೇಳೆ ಮಾತ ನಾಡಿದ ‘ನವಯುಗ’ ಕಂಪೆನಿಯ ಅಧಿಕಾರಿ, ಪಂಪ್ವೆಲ್ ಸರ್ಕಲ್ ಬಗ್ಗೆ ಮಂಗಳೂರು ಮಹಾ ನಗರಪಾಲಿಕೆಯು ಕೆಲವೊಂದು ಬದಲಾವಣೆ ಸೂಚಿಸಿರುವುದರಿಂದ ಅಲ್ಲಿ ಫ್ಲೈಓವರ್ ನಿರ್ಮಾಣ ವಿಳಂಬವಾಗಿದೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರ ಸಂಸದರು, ಮನಪಾದ ಅಭಿಪ್ರಾಯಕ್ಕೆ ಮಹತ್ವ ಕಲ್ಪಿಸದೆ ಕಾಮಗಾರಿ ಮುಂದುವರಿಸುವಂತೆ ಸೂಚಿಸಿದರು. ಇದಕ್ಕೆ ಸಮ್ಮತಿಸಿದ ಗುತ್ತಿಗೆ ಸಂಸ್ಥೆಯ ಅಧಿಕಾರಿ, ತೊಕ್ಕೊಟ್ಟಿನಿಂದ ಪಂಪ್ವೆಲ್ ಪ್ಲೈಓವರ್ ನಿರ್ಮಾಣವರೆಗಿನ ಕಾಮಗಾರಿಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುತ್ತೇವೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ:
ಬಹುಗ್ರಾಮ ಕುಡಿಯುವ ನೀರಿನ ಯೋಜ ನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿ ನೀಡಿದರು. ಮರವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾರ್ಚ್ನಲ್ಲಿ, ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೆರಡು ತಿಂಗಳಲ್ಲಿ ಹಾಗೂ ಸರಪಾಡಿ ಮತ್ತು ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಪ್ರಿಲ್ನಲ್ಲಿ ಮುಗಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗೆ ಹೋಗದೆ ಇದ್ದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸುವ ಕಾರ್ಯ ನಡೆಯುತ್ತಾ ಇದೆ. ಜಿಲ್ಲೆ ಯಲ್ಲಿ 127 ಮಕ್ಕಳು ಶಾಲೆಗೆ ತೆರಳದೆ ಇರುವ ಮಾಹಿತಿ ಸಿಕ್ಕಿದ್ದು ಈ ಪೈಕಿ 121 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. 6 ಮಕ್ಕಳು ರಾಜ್ಯ ಬಿಟ್ಟು ಬೇರೆ ಕಡೆ ಹೋಗಿರುವುದರಿಂದ ಅವರನ್ನು ಶಾಲೆಗೆ ಸೇರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಅಪರ ಜಿಲ್ಲಾ ಧಿಕಾರಿ ಕುಮಾರ್, ಜಿಪಂ ಸಿಇಒ ಶ್ರೀವಿದ್ಯಾ, ನಾಮನಿರ್ದೇಶಿತ ಸದಸ್ಯರಾದ ಗೋಕುಲ್ದಾಸ್ ಶೆಟ್ಟಿ, ಅಶೋಕ್ ಉಪಸ್ಥಿತರಿದ್ದರು.