ಮಂಗಳೂರು: ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಮಂಗಳೂರಿನಲ್ಲಿ ಈ ಹಿಂದೆ ನಡೆದ ಪಬ್ ದಾಳಿ ಪ್ರಕರಣದ ತನಿಖೆಗೆಂದು ಇಂದು ಮಂಗಳೂರಿಗೆ ಆಗಮಿಸಿ, ನಗರದ ನ್ಯಾಯಾಲಯಕ್ಕೆ ಹಾಜರಾದರು.
ಈ ಸಂದರ್ಭದಲ್ಲಿ ಮೂಡಬಿದ್ರೆಯಲ್ಲಿ ಇತ್ತೀಚಿಗೆ ಮುಸುಕುಧಾರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಹತ್ಯೆ ಕುರಿತ ಅಭಿಪ್ರಾಯದ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅದಕ್ಕೆ ಮೂಡಬಿದ್ರೆಯಂತಹ ಜನನಿಬಿಡ ಪ್ರದೇಶದಲ್ಲಿ ಹಾಡುಹಗಲೇ ಪ್ರಶಾಂತ್ ಎಂಬ ಯುವಕನ ಹತ್ಯೆ ನಡೆದೂ ಇಷ್ಟು ದಿನವಾದರೂ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನಿಗೊಳಪಡಿಸಲು ಸಾಧ್ಯವಾಗಲಿಲ್ಲ. ಸರ್ಕಾರದ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ಕೊಲೆ ನಡೆದು ಇಷ್ಟು ದಿನಗಳಾದರೂ ಹಂತಕರ ಪತ್ತೆ ಇನ್ನೂ ಆಗಿಲ್ಲ. ಸರ್ಕಾರದ ಹಿಂದೂ ವಿರೋಧಿ ನೀತಿಗೆ ಈ ಪ್ರಕರಣ ಪುಷ್ಠಿ ನೀಡುತ್ತಿದ್ದು, ಸರಕಾರಕ್ಕೆ ನೈತಿಕತೆಯೆಂಬುವುದು ಇದ್ದರೆ ಪ್ರಶಾಂತ್ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಿ ಎಂದು ಮುತಾಲಿಕ್ ಸವಾಲೆಸದರು. ಇಲ್ಲವಾದಲ್ಲಿ ಶ್ರೀರಾಮ ಸೇನೆ ಉಗ್ರವಾದ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ನಾಳೆ (ಗುರುವಾರ) ಮೃತ ಪ್ರಶಾಂತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.




