ಕುಂದಾಪುರ: ತಾಲೂಕಿನ ಬೈಂದೂರು ಸಮೀಪದ ಬಿಜೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪುಂದ ಸೇತುವೆಯ ಸ್ವಲ್ಪ ಹಿಂದಿನ ತಿರುವಿನಲ್ಲಿ ಮಂಗಳವಾರ ರಾತ್ರಿ ಸುಮಾರು ಹತ್ತು ಗಂಟೆಯ ಸಮಯದಲ್ಲಿ ಮೀನು ಸಾಗಾಟದ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಗೋವಾ ಕಡೆಗೆ ಸಾಗುತ್ತಿದ್ದ ಇನ್ಸುಲೇಟರ್ ಗಾಡಿಯ ಡ್ರೈವರ್ ನ ಕಾಲು ಸ್ಟೇರಿಂಗಿನ ನಡುವೆ ಸಿಲುಕಿಕೊಂಡದ್ದರಿಂದ ವಾಹನವನ್ನು ಬೇರ್ಪಡಿಸಲು ಹರಸಾಹಸ ಪಡಬೇಕಾಯಿತು. ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ಸುಲೇಟರ್ ವಾಹನದ ಚಾಲಕನ ನಿರ್ಲಕ್ಷತೆ ಮತ್ತು ಓವರ್ಟೇಕಿನಿಂದಾಗಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ನೇರವಾಗಿ ಡಿಕ್ಕಿ ಸಂಭವಿಸಿತು. ಎಲೆಕ್ಟ್ರಿಕ್ ಕಂಬಕ್ಕೆ ಒಂದು ವಾಹನವು ಬಡಿದದ್ದರಿಂದ ಕಂಬವು ಸಂಪೂರ್ಣವಾಗಿ ತುಂಡಾಗಿ ವೈರಿನ ಸಹಾಯದಿಂದ ನಿಂತಿದ್ದರಿಂದ , ಅಲ್ಲದೇ ವಾಹನದ ಡಿಸೇಲ್ ಸೋರಿಕೆಯಿಂದ ಆಗಬಹುದಾದ ದೊಡ್ಡ ದುರಂತ ತಪ್ಪಿದಂತಾಗಿದೆ.
ಇದರಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಸ್ಥಳೀಯರಾದ ನಾಗರಾಜ್ ಆಚಾರ್ಯ, ಸುರೇಶ್ ಪೂಜಾರಿ, ಪ್ರವೀಣ್ ಆಚಾರಿ ವಾಹನದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಚಾಲಕನನ್ನು ರಕ್ಷಿಸಲು ಬಹಳ ನೆರವಾದರು. ಕ್ರೇನ್ ನ ಮುಖಾಂತರ ವಾಹನವನ್ನು ಬೇರ್ಪಡಿಸಲಾಯಿತು, ಬೈಂದೂರು ಪೋಲೀಸರು ಆಗಮಿಸಿ ವಾಹನದ ಸಂಚಾರಕ್ಕೆ ಅನುವುಮಾಡಿಕೊಟ್ಟರು.
















