ಉಡುಪಿ: ಅಂದು ಜನವರಿ ತಿಂಗಳ ಕರಾಳ ರಾತ್ರಿ ತನ್ನ ಬೈಕಿನಲ್ಲಿ ಮನೆಗೆ ಬರುತ್ತಿದ್ದ ವೇಳೆ ಕೋಟೇಶ್ವರ ಬೈಕ್ ನಿಯಂತ್ರಣ ತಪ್ಪಿ ಪುಟ್ ಪಾತಿಗೆ ಡಿಕ್ಕಿ ಹೊಡೆದ ಅಪಘಾತದಲ್ಲಿ ಕುಂದಾಪುರದ ತೆಕ್ಕಟ್ಟೆ ಸಮೀಪದ ಕನ್ನುಕೆರೆಯ ನಿವಾಸಿ ಸುಮಂತ್ ದೇವಾಡಿಗ ಸಾವನ್ನಪ್ಪಿದ್ದರು. ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸುಮಂತ ದೇವಾಡಿಗನ ಅಕಾಲಿಕ ಮರಣಕ್ಕೆ ಇಡೀ ಊರಿಗೆ ಊರೇ ಶೋಕತಪ್ತರಾಗಿದ್ರು.
(ಅಪಘಾತದಲ್ಲಿ ಸಾವನ್ನಪ್ಪಿದ ಸುಮಂತ್ ದೇವಾಡಿಗ)
ತನ್ನ ನೆಚ್ಚಿನ ಗೆಳೆಯನ ಅಗಲುವಿಕೆಯಿಂದ ಆತನ ಸ್ಮರಣಾರ್ಥವಾಗಿ ಊರಿಗೆ ಹಾಗೂ ಊರಿನ ಜನರಿಗೆ ಅನುಕೂಲವಾಗುವಂತೆ ಏನನ್ನದರೂ ಮಾಡಬೇಕು ಹಾಗೂ ಆ ಮೂಲಕ ಅಗಲಿದ ಗೆಳೆಯಯನ ನೆನಪು ಚಿರಸ್ಥಾಯಿಗಾಬೇಕೆಂಬ ಹಂಬಲದೊಂದಿಗೆ ಪಾಲ್ಕನ್ ಕ್ಲಬ್ ಎಂಬ ಸಂಸ್ಥೆ ಕನ್ನುಕೆರೆಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣವೊಂದನ್ನು ನಿರ್ಮಿಸಿದೆ. ಸುಮಾರು 60 ಸಾವಿರ ಅಂದಾಜು ಮೌಲ್ಯದ ಬಸ್ಸು ನಿಲ್ದಾಣ ಸುಸಜ್ಜಿತವಾಗಿದ್ದು ಕನ್ನುಕೆರಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿರ್ಮಾಣಗೊಂಡಿದೆ. ಕುಳಿತುಕೊಳ್ಳಲು ಉತ್ತಮವಾದ ಬೆಂಚು, ನೆಲಕ್ಕೆ ಉತ್ತಮ ಗುಣಮಟ್ಟದ ಇಂಟರ್ ಲಾಕ್, ಮೇಲ್ಮಾಡಿಗೆ ಉತ್ತಮ ಗುಣಮಟ್ಟದ ಬ್ಲೂ ಸ್ಕೋಪ್ ಅಳವಡಿಸುವ ಮೂಲಕ ಬಸ್ಸು ನಿಲ್ದಾಣವನ್ನು ಸುಂದರವಾಗಿ ನಿರ್ಮಿಸಲಾಗಿದೆ.
ಸುಮಾರು 27 ವರ್ಷಗಳಿಂದ ಕನ್ನುಕೆರೆ, ತೆಕ್ಕಟ್ಟೆ ಹಾಗೂ ಕುಂಭಾಸಿ ಪರಿಸರ ಸೇರಿದಂತೆ ಊರು ಹಾಗೂ ಪರವೂರುಗಳಲ್ಲಿಯೂ ತನ್ನ ಸಮಾಜಿಕ ಸೇವೆ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಪಾಲ್ಕನ್ ಕ್ಲಬ್ ಸಂಸ್ಥೆಯು ಬಡವರ ಹಾಗೂ ಅಶಕ್ತರ ಪರವಾಗಿ ನಿಂತುತನ್ನ ಕೈಯಲ್ಲಾದ ಸೇವೆಯನ್ನು ನೀಡುತ್ತಾ ಬಂದಿದೆ. ವರ್ಷಂಪ್ರತಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಶಿಕ್ಷಣ, ಆರೋಗ್ಯ, ಕ್ರೀಡೆ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಚಟುವಟಿಕೆಗಳನ್ನು ನಡೆಸಿದೆ.
ಭಾನುವಾರ ಈ ಬಸ್ಸು ನಿಲ್ದಾಣವನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಾಲ್ಕನ್ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಸೇರಿದಂತೆ ಊರಿನ ನಾಗರೀಕರು ಸೇರಿ ಲೋಕಾರ್ಪಣೆಗೊಳಿಸಿದ್ರು. ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಂ ಶೆಟ್ಟಿ, ಸಮಾಜಸೇವಕ ಹಾಗೂ ಸ್ಪೂರ್ತಿಧಾಮ ಕೋಟೇಶ್ವರದ ಕಾರ್ಯನಿರ್ವಾಹಕ ಮುಖ್ಯಸ್ಥ ಡಾ. ಕೇಶವ್ ಕೋಟೇಶ್ವರ, ಪಾಲ್ಕನ್ ಕ್ಲಬ್ ಅಧ್ಯಕ್ಷ ಸಲಾಂ, ತೆಕ್ಕಟ್ಟೆ ಗ್ರಾಮಪಂಚಾಯತ್ ಅಧ್ಯಕ್ಷ ಶೇಖರ್ ಮೊದಲಾದವರು ಉಪಸ್ಥಿತರಿದ್ದು ಪಾಲ್ಕನ್ ಕ್ಲಬ್ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು. ಸ್ಥಳೀಯರಾದ ಮಂಜುನಾಥ ಆಚಾರ್ಯ ಹಾಗೂ ಸತೀಶ್ ಬಂಗೇರ ಎನ್ನುವವರು ಇದರ ನಿರ್ಮಾಣದಲ್ಲಿ ಸಹಕರಿಸಿ ಶೀಘ್ರ ಬಸ್ಸು ನಿಲ್ದಾಣ ಕಾಮಗಾರಿ ಮುಗಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ನಡೆಯುವ ಹಿನ್ನೆಲೆ ಹಲವು ಸಮಯಗಳಿಂದ ಇಲ್ಲಿ ಬಸ್ಸು ನಿಲ್ದಾಣಕ್ಕೆ ಸಮಸ್ಯೆಯಿದ್ದು ಜನರ ಬಹುಬೇಡಿಕೆಯಿದಾಗಿತ್ತು. ಈ ನಿಟ್ಟಿನಲ್ಲಿ ಪಾಲ್ಕನ್ ಕ್ಲಬ್ ಸುಸಜ್ಜಿತ ಬಸ್ಸು ನಿಲ್ದಾಣವನ್ನು ನಿರ್ಮಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದ್ದು ಮಾತ್ರವಲ್ಲದೇ ಅಗಲಿದ ತಮ್ಮ ಗೆಳೆಯನ ನೆನಪನ್ನು ಚಿರಸ್ಥಾಯಿಯಾಗುವಂತೆ ಮಾಡುತ್ತಿದ್ದಾರೆ.
ವರದಿ ಮತ್ತು ಚಿತ್ರ- ಯೋಗೀಶ್ ಕುಂಭಾಸಿ