ಕುಂದಾಪುರ: ಜನಮನ್ನಣೆಗೆ ಪಾತ್ರವಾದ ಕನ್ನಡದ ‘ಓಂ’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಬಣ್ಣಹಚ್ಚಿ ಅಭಿಮಾನಿಗಳ ಮನಸೂರೆಗೊಂಡ ಉಡುಪಿ ಮೂಲದ ಹರೀಶ್ ರಾಯ್ ಕುಂದಾಪುರದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಹೋದರಿ ಹಾಗೂ ಬಾವನೊಂದಿಗೆ ಆಗಮಿಸಿದ್ದ ಹರೀಶ್ ರಾಯ್ ಗಂಟೆಗಳ ಕಾಲ ದೇವರ ಸನ್ನಿಧಿಯಲ್ಲಿದ್ದರು.
ಬಳಿಕ ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಅವರು, ತುಂಬಾ ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದಿದ್ದೆ, ತುಂಬಾ ಇಷ್ಟವಾದ ಸ್ಥಳವಾದರೂ ಕೂಡ ಇತ್ತೀಚೆಗೆ ಕೆಲವು ಒತ್ತಡದ ಕಾರಣ ಇಲ್ಲಿಗೆ ಬರಲಾಗಿರಲಿಲ್ಲ. ಇಂದು ಶ್ರೀ ದೇವರ ದರ್ಶನ ಪಡೆದಿರುವುದು ತುಂಬಾ ಸಂತಸವಾಗಿದೆ ಎಂದು ಮೊದಲಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಬಳಿಕ ಪ್ರತಿನಿಧಿ ಕೇಳಿದ ತುಳು ಚಿತ್ರದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ತುಳು ಚಿತ್ರಗಳು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗುತ್ತಿದ್ದು ಹಲವು ಸಿನೆಮಾಗಳು ಹಿಟ್ ಆಗಿದೆ. ತಾನೂ ಕೂಡ ಯಾವುದೇ ಉತ್ತಮ ಅವಕಾಶಗಳು ಲಭಿಸಿದಲ್ಲಿ ತುಳು ಚಿತ್ರದಲ್ಲಿ ನಟಿಸುವೆ ಎಂದು ಮನದಾಳ ತೋಡಿಕೊಂಡರು.
ಇನ್ನು ಸ್ಯಾಂಡಲ್ ವುಡ್ (ಕನ್ನಡ ಚಿತ್ರರಂಗ)ದಲ್ಲಿ ಕರಾವಳಿಯ ಹಲವು ಕಲಾವಿದರು ತಮ್ಮ ಪ್ರತಿಭೆಯ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದ ಅವರು ತಾನು ಇದೀಗಾ ಅನಂತನಾಗ್ ಅವರೊಂದಿಗೆ ‘ಪ್ಲ್ಯಾನ್’ ಸೇರಿದಂತೆ ಇನ್ನೆರಡು ಚಿತ್ರದಲ್ಲಿ ಖಳನಾಯಕನಾಗಿ ಬಣ್ಣ ಹಚ್ಚುತ್ತಿದ್ದೇನೆಂದು ಪ್ರತಿಕ್ರಿಯಿಸಿದರು.
ಚಿತ್ರ, ವರದಿ- ಯೋಗೀಶ್ ಕುಂಭಾಸಿ