ಮಂಗಳೂರು / ಉಳ್ಳಾಲ : ದ್ವಿಚಕ್ರ ವಾಹನದಲ್ಲಿ ಸಂಚಾರಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಪರಾರಿಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು – ಚೆಂಬುಗುಡ್ಡೆ ಬಳಿ ಗುರುವಾರ ಸಂಜೆ ನಡೆದಿದೆ.
ದುಷ್ಕರ್ಮಿಗಳಿಂದ ದಾಳಿಗೊಳಗಾದ ವ್ಯಕ್ತಿಯನ್ನು ಉಳ್ಳಾಲ ಸಂತೋಷ್ ನಗರದ ಪಂಡಿತ್ ಹೌಸ್ ನಿವಾಸಿ ಲ್ಯಾನ್ಸಿ ಡಿಸೋಜ (32) ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಲ್ಯಾನ್ಸಿ ಡಿಸೋಜ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲ್ಯಾನ್ಸಿ ಡಿಸೋಜ ಅವರು ಎಂದಿನಂತೆ ಸಂಜೆ ವೆಲ್ಡಿಂಗ್ ಕೆಲಸ ಮುಗಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಮಾರೂತಿ ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಇವರ ವಾಹನಕ್ಕೆ ಡಿಕ್ಕಿ ಹೊಡೆದು ಇವರು ಕೆಳಗೆ ಬಿದ್ದ ತಕ್ಷಣ ಕೊಲೆ ಮಾಡುವ ಉದ್ದೇಶದಿಂದ ಹರಿತವಾದ ಅಯುಧಗಳಿಂದ ಲ್ಯಾನ್ಸಿ ಡಿಸೋಜ ಅವರನ್ನು ಯದ್ವತದ್ವ ಕಡಿದು, ತಾವು ಬಂದ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಕಾರನ್ನು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ದುಷ್ಕರ್ಮಿಗಳು ಬಿಟ್ಟು ಹೋದ ಎರಡು ತಲವಾರು ಪತ್ತೆಯಾಗಿವೆ. ಹಲ್ಲೆ ನಡೆಸಿದ ತಂಡದಲ್ಲಿ ಮೂವರು ಆರೋಪಿಗಳಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಳಿ ನಡೆಸಿ ಪರಾರಿಯಾದ ಆರೋಪಿಗಳ ಬಗ್ಗೆ ಯಾವೂದೇ ಸುಳಿವು ಲಭ್ಯವಾಗಿಲ್ಲ.
ಲ್ಯಾನ್ಸಿ ಡಿಸೋಜ ಅವರು 2014ರಲ್ಲಿ ನಡೆದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಯತೀಶ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಜೈಲು ಸೇರಿದ್ದರು. ಇದೀಗ ಅವರು ಎರಡು ವಾರಗಳ ಹಿಂದೆ ತಾನೇ ಜಾಮೀನು ಮೇಲೆ ಹೊರ ಬಂದಿದ್ದರು ಎನ್ನಲಾಗಿದೆ. ಈಗ ನಡೆದಿರುವ ದಾಳಿಗೂ ಈ ಪ್ರಕರಣಕ್ಕೂ ಸಂಬಂಧವಿರ ಬಹುದೆಂದು ಶಂಕೀಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.