ಮಂಗಳೂರು: ಕರಾವಳಿಯಲ್ಲಿ ಸಂಚಲನ ಮೂಡಿಸಿರುವ ನೇತ್ರಾವತಿ-ಎತ್ತಿನಹೊಳೆ ನದಿ ತಿರುವು ಯೋಜನೆಯ ವಿರುದ್ಧ ಸೆ. 19ರಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಸರ್ವ ಕಾಲೇಜು ಬಂದ್ ಮಾಡುವ ಮೂಲಕ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿಗೆ ಮಾರಕವಾಗಿರುವ ಎತ್ತಿನ ಹೊಳೆ ಯೋಜನೆಯನ್ನು ಸರ್ಕಾರ ಕೈ ಬಿಡುವವರೆಗೆ ಹೋರಾಟ ಮುಂದುವರಿಯಲಿದೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಜಿಲ್ಲೆಯ ರಾಜಕೀಯ ನಾಯಕರು ಸ್ಥಳೀಯರಿಗೆ ದ್ರೋಹ ಬಗೆದಿರುವುದು ದುರಾದೃಷ್ಟಕರ. ಜಿಲ್ಲೆಯ ಜನರು ಹಾಹಾಕಾರ ಅನುಭವಿಸುವಂತೆ ಮಾಡುವ ಎತ್ತಿನಹೊಳೆಯನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಜಿಲ್ಲೆಯ ರಾಜಕಾರಣಿಗಳು ಈಗಲಾದರೂ ಎಚ್ಚೆತ್ತು ಈ ಯೋಜನೆಯನ್ನು ನಿಲ್ಲಿಸಲು ಸಾದ್ಯವಾಗದಿದ್ದರೆ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಎಲ್ಲರಿಗೂ ತಿಳಿದಂತೆ ಈ ಎತ್ತಿನ ಹೊಳೆ ಯೋಜನೆಯು ಹಣಕ್ಕೋಸ್ಕರ ಮತ್ತು ತಮ್ಮ ರಾಜಕೀಯ ಬೇಳೆ ಬೇಯಿಸಲು ರಾಜಕಾರಣಿಗಳು ತೆಗೆದುಕೊಂಡಿರುವ ನಿರ್ಧಾರವಾಗಿದೆ. ಈ ಯೋಜನೆಯಿಂದ ಸುಮಾರು ಸಾವಿರಾರು ಕೋಟಿ ರುಪಾಯಿ ರಾಜಕಾರಣಿಗಳ ಜೇಬು ತುಂಬಲಿದೆ. ಇದು ನಮ್ಮ ಸಂಸದರು, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ನಮಗೆ ಮಾಡುತ್ತಿರುವ ದ್ರೋಹವಾಗಿದೆ. ಅವೈಜ್ಞಾನಿವಾಗಿರುವ ಈ ಯೋಜನೆಯಿಂದ ಅರಣ್ಯ ನಿಯಮ ಉಲ್ಲಂಘಿನೆಯಾಗುತ್ತಿದ್ದರೂ ನಮ್ಮ ಜಿಲ್ಲೆಯ ಉಸ್ತುವಾರಿ ಮತ್ತು ಅರಣ್ಯ ಸಚಿವರು ಚಕಾರವೆತ್ತುತ್ತಿಲ್ಲ. ಇಲ್ಲಿನ ರಾಜಕಾರಣಿಗಳಿಂದಲೇ ಜಿಲ್ಲೆಯ ಕಗ್ಗೊಲೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಜನರು ನೀರಿನ ಅಭಾವನ್ನು ಅನುಭವಿಸುತ್ತಿದ್ದು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಇಂಥ ಸಂದರ್ಭದಲ್ಲಿ ಇಲ್ಲಿ ಸಿಗುವ ನೀರನ್ನು ಕೋಲಾರ ಮತ್ತು ಇತರೆಡೆಗಳಿಗೆ ಸಾಗಿಸುವುದರಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಳುಕಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ಅನುಷ್ಟಾನದ ವಿರುದ್ಧ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಎದ್ದೇಳು ದಕ್ಷಿಣ ಕನ್ನಡ ಎದ್ದೇಳು’ ಎನ್ನುವ ಕರಪತ್ರದೊಂದಿಗೆ ಜನತೆಯನ್ನು ಎಚ್ಚರಿಸುವ ಕೆಲಸವನ್ನು ಮಾಡಲಿದೆ ಎಂದರು.
ಸೆ. 19ರಂದು 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ೧೯೦ಕ್ಕೂ ಹೆಚ್ಚು ಕಾಲೆಜುಗಳಿಂದ ೧೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಯೋಜನೆ ವಿರೋಧಿಸಿ ಸೆ. 15ರಂದು ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಹೋರಾಟದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ನಾಡಿನ ಜನರು ಜಾತಿ ಭೇದ ಮರೆತು ಈ ಯೋಜನೆ ವಿರುದ್ಧ ಉಗ್ರಾವಾದ ಹೋರಾಟನಡೆಸ ಬೇಕು. ಜನತೆ ಕೂಡ ಜಿಲ್ಲೆಯ ಉಳಿವಿಗಾಗಿ ಧ್ವನಿ ಎತ್ತಬೇಕು. ವಿದ್ಯಾರ್ಥಿಗಳ ಜೊತೆ ಪ್ರತಿಯೊಬ್ಬರೂ ಕೈಜೋಡಿಸಿಕೊಂಡು ಈ ಹೋರಾಟದಲ್ಲಿ ಭಾಗಿಯಾದರೆ ವಿದ್ಯಾರ್ಥಿಗಳ ಶಕ್ತಿಯ ಜೊತೆ ಸರ್ವರ ಶಕ್ತಿಯೂ ಸೇರಿ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ. ನಮ್ಮ ಜೀವನವನ್ನು ಮುಡುಪಾಗಿಟ್ಟು ನಾವು ನೇತ್ರಾವತಿಯನ್ನು ರಕ್ಷಿಸುವ ಪಣ ತೊಡಬೇಕಿದೆ ಎಂದು ದಿನಕರ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ವ ಕಾಲೇಜು ಸಂಘದ ಪಧಾಧಿಕಾರಿಗಳು ಉಪಸ್ಥಿತರಿದ್ದರು.