ಮೈಸೂರು,ಸೆ.08: ಮೈಸೂರು ದಸರಾ ಆನೆಗಳು, ಕಾವಾಡಿಗಳು ಮತ್ತು ಮಾವುತರು ಸೇರಿದಂತೆ ಒಟ್ಟು 89 ಲಕ್ಷ ರೂ. ಮೊತ್ತದ ವಿಮೆಯನ್ನು ಅವರಿಗೆ ಮಾಡಿಸಲಾಗಿದೆ. ಅಂಬಾರಿ ಹೊರುವ ಅರ್ಜುನ ಸೇರಿದಂತೆ 12 ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತವೆ. ನ್ಯೂ ಇಂಡಿಯಾ ಇನ್ಶೊರೆನ್ಸ್ ಕಂಪನಿಯಿಂದ ಆನೆಗಳಿಗೆ 35 ಲಕ್ಷದ ವಿಮೆ ಮಾಡಿಸಲಾಗಿದೆ. 24 ಕಾವಾಡಿ ಮತ್ತು ಮಾವುತರಿಗೆ 24 ಲಕ್ಷ ರೂ., ಆಸ್ತಿ ನಷ್ಟಕ್ಕೆ 30 ಲಕ್ಷ ರೂ. ವಿಮೆ ಮಾಡಿಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.
2014ನೇ ಸಾಲಿನಲ್ಲಿ ಗಜಪಡೆಗಳಿಗೆ 40 ಲಕ್ಷ ರೂ.ಗಳ ವಿಮೆ ಮಾಡಿಸಲಾಗಿತ್ತು. ದಸರಾ ಆನೆಗಳು ತಾಲೀಮು ನಡೆಸಲು ನಗರ ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಬಹುದು ಎಂದು 30 ಲಕ್ಷ ವಿಮೆ ಮಾಡಿಲಾಗಿದೆ.ಸೆಪ್ಟೆಂಬರ್ 4ರಿಂದ ಅಕ್ಟೋಬರ್ 30ರ ತನಕ ಈ ವಿಮೆ ಜಾರಿಯಲ್ಲಿರುತ್ತದೆ.
ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿ ಹೊತ್ತು ಸಾಗುವ ಅರ್ಜುನ ಸೇರಿ ದಂತವುಳ್ಳ ಗಂಡಾನೆಗಳಿಗೆ 3.5 ಲಕ್ಷ, ಹೆಣ್ಣಾನೆಗಳಿಗೆ 2.5 ಲಕ್ಷದ ವಿಮೆ ಮಾಡಿಸಲಾಗಿದೆ.
ಅರಣ್ಯ ಇಲಾಖೆ ವತಿಯಿಂದ 55 ಸಾವಿರ ಪ್ರೀಮಿಯಂ ಹಣ ಕಟ್ಟಲಾಗಿದ್ದು, ದಸರಾ ಸಮಿತಿ ಈ ಹಣವನ್ನು ಇಲಾಖೆಗೆ ಪಾವತಿ ಮಾಡಲಿದೆ. ದಸರಾದಲ್ಲಿ ಪಾಲ್ಗೊಳ್ಳುವ 6 ಆನೆಗಳ ತಂಡ ಮೈಸೂರಿಗೆ ಕಳೆದ ವಾರ ಆಗಮಿಸಿದೆ.