ಆ.30ರ ಮುಂಜಾನೆ ಗುಜ್ಜಾಡಿಯಲ್ಲ 2 ಜಾನುವಾರು ರಕ್ಷಿಸಿ, ಓರ್ವ ಆರೋಪಿಯ ಬಂಧನವಾಗಿತ್ತು
ಕುಂದಾಪುರ: ಮಾಂಸಕ್ಕಾಗಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಕಳವು ಮಾಡಿ ಸಾಗಿಸುತ್ತಿದ್ದ ವೇಳೆ ಕಳೆದ ಭಾನುವಾರ (ಆ.30) ಮುಂಜಾನೆ ಓರ್ವ ಆರೋಪಿಯನ್ನು ಬಂಧಿಸಿ ಸಾಗಾಟಕ್ಕೆ ಬಳಸಿದ್ದ ಮಾರುತಿ ಓಮ್ಮಿ ಕಾರನ್ನು ಮತ್ತು ಎರಡು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದರು. ಇದೇ ವೇಳೆ ಪರಾರಿಯಾಗಿದ್ದ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿಯನ್ನು ಮೂಲತಃ ಸಾಗರದವನಾಗಿರುವ ಗಂಗೊಳ್ಳಿ ನಿವಾಸಿ ಮೊಹಮ್ಮದ್ ಹುಸೇನ್ (31) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
(ಬಂಧಿತ ಆರೋಪಿ ಮೊಹಮ್ಮದ್ ಹುಸೇನ್)
ಘಟನೆ ಹಿನ್ನೆಲೆ: ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಹೊರಣಿ ಚಿತ್ತೇರಿ ಮಂಜುನಾಥ ಕಟ್ಟಿನಮಕ್ಕಿ ಎಂಬುವರ ಕೊಟ್ಟಿಗೆಯಿಂದ ಆರೋಪಿಗಳು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಜಾನುವಾರುಗಳನ್ನು ಕಳವು ಮಾಡಿಕೊಂಡು ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿಕೊಂಡು ಹೋಗುವಾಗ ಎಚ್ಚರಗೊಂಡ ಮಂಜುನಾಥ ಅವರು ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಗಂಗೊಳ್ಳಿ ಸಮೀಪದ ಗುಜ್ಜಾಡಿ ಜಂಕ್ಷನ್ ಬಳಿ ಮಾರುತಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ ಸಂದರ್ಭ ಕಳವು ಮಾಡಿದ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಇದೇ ಸಂದರ್ಭ ಕಾರಿನಲ್ಲಿದ್ದ ಮಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದರು. ಅವರ ಪೈಕಿ ಓರ್ವನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿಗಾಗಿ ಗಂಗೊಳ್ಳಿ ಪೊಲೀಸರು ಬಲೆಬೀಸಿದ್ದಾರೆ.
ಬಂಧಿತ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.