ಮಂಗಳೂರು, ಸೆ.01 : ಶಿಕ್ಷಣದಿಂದ ಮಾತ್ರ ಮಾನವನ ಬದುಕು ಪರಿಪೂರ್ಣ ಆಗಬಲ್ಲದು. ಇದನ್ನರಿತ ಪೋಷಕರು ತಮ್ಮ ಮಕ್ಕಳು ಜಾಗತೀಕರಣವನ್ನು ಎದುರಿಸುವ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಾರೆ. ಮಕ್ಕಳ ಭವಿಷ್ಯಕ್ಕಾಗಿ ಆಧುನಿಕತೆಯುಳ್ಳ ವಿದ್ಯಾಲಯಗಳ ಶೋಧನೆಯಲ್ಲಿರುತ್ತಾರೆ. ಪ್ರತಿಷ್ಠಿತ ವಿದ್ಯಾದೇಗುಲಗಳಲ್ಲಿ ವಿಶ್ವಾಸವನ್ನೀಡುವ ಹೆತ್ತವರು ಋಣಾತ್ಮಕ ಚಿಂತನೆಯನ್ನು ತೊರೆದು ಧನಾತ್ಮಕ ಚಿಂತನೆಯನ್ನು ಮೈಗೂಡಿಸಿ ಮಕ್ಕಳನ್ನು ಸಾಕ್ಷರಸ್ಥರನ್ನಾಗಿಸುವ ಜೊತೆಗೆ ಸುಸಂಸ್ಕೃತ ಬದುಕನ್ನು ರೂಪಿಸಬೇಕು. ಇವೆಲ್ಲಕ್ಕೂ ಶಿಕ್ಷಣ ಸಂಸ್ಥೆಗಳು ಬದ್ಧವಾಗಿ ಸೇವಾನಿರತವಾಗಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೈ. ರೆ| ಡಾ| ಅಲೋಸಿಯ ಸ್ ಪಾವ್ಲ್ ಡಿ’ಸೋಜಾ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕಾ ವ್ಯಾಪ್ತಿಯ ಕುಳಾಯಿ ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿ ಇಂದಿಲ್ಲಿ ಸೋಮವಾರ ಭಾರತದಲ್ಲಿನ ಏಕವ್ಯಕ್ತಿ ಆಡಳಿತದ ಶಿಕ್ಷಣ ಸಂಸ್ಥೆಗಳ ರಾಯನ್ ಇಂಟರ್ನ್ಯಾಶನ ಲ್ ಶೈಕ್ಷಣಿಕ ಸಮೂಹದ ನೂತನ ಶಾಲಾ ಕಟ್ಟಡಕ್ಕೆ ಆಶೀರ್ವಚನಗೈದು ಶಿಲಾನ್ಯಾಸ ನೆರವೇರಿಸಿ ಬಿಷಪ್ ಅಲೋಸಿಯ ಸ್ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹುಟ್ಟಿಬೆಳೆದು ಸದ್ಯ ಶಿಕ್ಷಣತಜ್ಞೆಯಾಗಿ ವಿಶ್ವಕ್ಕೆ ಪರಿಚಿತ ಮೇಡಂ ಗ್ರೇಸ್ ಪಿಂಟೋ ಸಾರಥ್ಯದ ರಾಯನ್ ಇಂಟರ್ನ್ಯಾಶನಲ್ ಶೈಕ್ಷಣಿಕ ಸಂಸ್ಥೆಯು ತಮ್ಮ ಹುಟ್ಟೂರಲ್ಲೂ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದು ಅಭಿನಂದನೀಯ. ಹುಟ್ಟೂರ ಜನತೆಯ ಋಣ ಸಂದಾಯಕ್ಕೂ ಭಾಜನ ರಾಗಿರುವ ಸಂಸ್ಥಾಪಕ ಡಾ. ಆಗಸ್ಟಿನ್ ಎಫ್. ಪಿಂಟೋ (ನಿರುಡೆ-ಮೂಡಬಿದ್ರೆ), ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ (ಬಜ್ಪೆ-ಸುಂಕದಕಟ್ಟೆ) ದಂಪತಿಗಳ ಕನಸು ನನಸಾಗಲಿ. ನಮ್ಮ ನಾಡಿನ ಜನತೆಗೆ ಇದೊಂದು ಭವ್ಯ ಯೋಜನೆಯಾಗಿದ್ದು, ಸಾವಿರಾರು ಮಕ್ಕಳು ಈ ಮೂಲಕ ಕಲಿತು ವಿಶ್ವದ ಮಿನುಗು ತಾರೆಯರುಗಳಾಗಲಿ ಎಂದೂ ಬಿಷಪ್ ಆಶಯ ವ್ಯಕ್ತ ಪಡಿಸಿದರು.
ಈ ಶುಭಾವಸರದಲ್ಲಿ ಗೌರವ ಅತಿಥಿಗಳಾಗಿ ಫಾ. ಎವ್ಜಿನ್ ಲೋಬೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕಾಸ್ತೆಲಿನೋ ವೃಕ್ಷಗಳನ್ನು ನೆಡುವ ಮೂಲಕ ಸಮಾರಂಭಕ್ಕೆ ಶುಭಾರೈಸಿದರು.
ರಾಯನ್ ಸಮೂಹ ತವರೂರಲ್ಲೂ ಹೆಜ್ಜೆಯನ್ನಿರಿಸಿ ಶಿಕ್ಷಣದ ಮೂಲಕ ಭವ್ಯ ಭಾರತದ ಕನಸನ್ನು ನನಸಾಗಿಸು ವ ಯೋಜನೆಗೆ ಹೆಜ್ಜೆಯನ್ನಿರಿಸಿದೆ. ನಮ್ಮ ಸಂಸ್ಥೆಯು ಮಕ್ಕಳಿಗೆ ಬರೇ ಶಿಕ್ಷಣ ನೀಡದೆ ಸಂಸ್ಕಾರಯುತ ಬದುಕನ್ನು ರೂಪಿಸುವ ಜೊತೆಗೆ ಪ್ರತಿಷ್ಠೆಯನ್ನು ತಂದೊದಗಿಸುತ್ತದೆ. ಭವಿಷ್ಯತ್ತಿನ ಮಕ್ಕಳ ಜೀವನ ಪಾನವದ ಹೊಣೆ ನಮ್ಮಲ್ಲಿದೆ. ಇದು ಯೇಸುಕ್ರಿಸ್ತರ ಕೃಪೆಯಿಂದ ಸಾಧ್ಯವಾಗಿದೆ ಎಂದು ಪ್ರಾಸ್ತವಿಕ ನುಡಿಗಳನ್ನಾಡಿ ರಾಯನ್ ಸಮೂಹದ ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೊ ತಿಳಿಸಿದರು.
ಸಮಾರಂಭದಲ್ಲಿ ಗಣ್ಯ ಮಹಾನೀಯರುಗಳಾಗಿ ಬಸ್ತಿ ವಾಮನ ಶೆಣೈ, ಎರಿಕ್ ಒಝೆರಿಯೋ, ಲೂವಿ ಜೆ.ಪಿಂಟೋ, ಆರ್ಕಿಟೆಕ್ಟ್ ಫಝ್ಲಿ ಕೆ.ಪಿ., ಅಲನ್ ಫೆರ್ನಾಂಡಿಸ್, ಉದ್ಯಮಿಗಳಾದ ರೋಹನ್ ಮೊಂತೇರೋ, ಅರುಣ್ ಮೆಂಡಿಸ್, ಜೋಕಿಮ್ ಪಿಂಟೋ, ಭಗಿನಿಯರುಗಳಾದ ಸಿ. ಗ್ಲಾಡಿಸ್, ಸಿ. ಮರಿಯಾ ಗೊರೆಟ್ಟಿ, ಸ್ಟೇನಿ ಅಲ್ವಾರೆಸ್ ಮತ್ತಿತರು ಉಪಸ್ಥಿತರಿದ್ದು ಶುಭಾರೈಸಿದರು.
ಶಿಕ್ಷಕಿ ಮಾರ್ಗರೇಟ್ ಕುವೆಲೋ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿಯರುಗಳಾದ ಸ್ನೇಹಲ್ ಎ.ಪಿಂಟೋ, ಸೋನಲ್ ಎ.ಪಿಂಟೋ, ಉನ್ನತಾಧಿಕಾರಿ ಪ್ರೇಮ್ ಶೆಟ್ಟಿ ಅತಿಥಿವರ್ಯರಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಸ್ನೇಹಲ್ ಪಿಂಟೋ ಅಭಾರ ಮನ್ನಿಸಿದರು.
ರಾಯನ್ ಶೈಕ್ಷಣಿಕ ಸಮೂಹ ರಾಷ್ಟ್ರದಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವರು. ರಾಯನ್ ಇಂಟರ್ನ್ಯಾಶನಲ್ ಮತ್ತು ರಾಯನ್ ಗ್ಲೋಬಲ್ ಸ್ಕೂಲ್ಸ್ ಎಂಬ ಬ್ರಾಂಡ್ಗಳ ಅಡಿ ಅನೇಕ ಶಾಲೆಗಳನ್ನು ರಾಯನ್ ಶೈಕ್ಷಣಿಕ ಸಮೂಹವು ನಿರ್ದೇಶಿಸುತ್ತಿದೆ. ಸಂಯುಕ್ತ ಅರಬ್ ಸಂಸ್ಥಾನಗಳ ಸೇರ್ಪಡೆ ಯೊಂದಿಗೆ, ಭಾರತ ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಸಾವಿರಾರು ವಿದ್ಯಾಥಿಗಳಿಗೆ ಈ ಶಾಲೆಗಳು ಶಿಕ್ಷಣ ನೀಡುತ್ತಿವೆ. ಮೇಡಂ ಪಿಂಟೋ ಅವರು ರಾಯನ್ ಸಮೂಹಕ್ಕೆ ಸಮಗ್ರ ನಿರ್ದೇಶನವನ್ನು ಮತ್ತು ವಿದ್ಯಾಥಿಗಳಿಗೆ ಪರಿಣಾಮಕಾರಿ ಶಿಕ್ಷಣದ ಅನುಭವವನ್ನು ನೀಡುತ್ತಿದ್ದಾರೆ.
ವಿದ್ಯಾಥಿಗಳು ದೇಶದ ಯಾವ ಮೂಲೆಯಲ್ಲಿಯೂ ಮತ್ತು ಜಾಗತಿಕ ಪರಿಸರದಲ್ಲಿ ಕಲಿಯಲು ಸಹಕಾರಿಯಾಗುವಂತೆ ರಾಯನ್ ಸಂಸ್ಥೆಗಳು ಐಸಿಎಸ್ಇ, ಸಿಬಿಎಸ್ಇ, ರಾಜ್ಯ ಮಂಡಳಿಗಳು, ಯುನಿವರ್ಸಿಟಿ ಆಫ್ ಕೇಂಬ್ರಿಜ್ ಇಂಟರ್ನ್ಯಾಷನಲ್ ಎಕ್ಸಾಮಿನೇಷನ್ಸ್ ಮತ್ತು ಇಂಟರ್ನ್ಯಾಷನಲ್ ಬ್ಯಾಕಲಾರಿಯಟ್ ಜೊತೆ ಭಾರತದಾದ್ಯಂತ (ರಾಯನ್ ಗ್ಲೋಬಲ್ ಸ್ಕೂಲ್ಸ್ ಬ್ರಾಂಡ್ ನಡಿ) ಸಂಯೋಜನೆಯನ್ನು ಹೊಂದಿವೆ. ಈ ಸಮೂಹಕ್ಕೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ.
ರೋನ್ಸ್ ಬಂಟ್ವಾಳ_