ಮಂಗಳೂರು,ಆಗಸ್ಟ್.25 : ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೊಹಮ್ಮದ್ ಬದ್ರುದ್ದೀನ್ (54) ಹೃದಯಾಘಾತದಿಂದ ಬೆಂಗಳೂರಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಅವರ ರಕ್ತದಲ್ಲಿ ಲೋಶುಗರ್ ಉಂಟಾಗಿ ಸೋಫಾದಲ್ಲಿ ಕುಳಿತಿದ್ದವರು ಕುಸಿದು ಬಿದ್ದು ಅಸುನೀಗಿದರೆಂದು ತಿಳಿದು ಬಂದಿದೆ.
ನಿನ್ನೆ ರಾತ್ರಿಯಷ್ಟೆ ಅವರು ತಮ್ಮ ಸ್ನೇಹಿತ ಹಾಗೂ ಮಾಜಿ ಎಂಎಲ್ ಸಿ ಸಲೀಂ ಮೊಹಮದ್ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಪ್ರಯಾಣಿಸಿದ್ದರು. ಇಂದು ಮುಂಜಾನೆ ಸಲೀಂ ಅವರೊಂದಿಗೆ ಸೋಫಾದಲ್ಲಿ ಕುಳಿತು ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ.
ತಕ್ಷಣ ಅವರನ್ನು ಬಸವನಗರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರ ವೇಳೆಗೆ ಕೊನೆಯುಸಿರೆಳೆದಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲರಾಗಿದ್ದ ಮೊಹಮ್ಮದ್ ಜನಾನುರಾಗಿಯಾಗಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಅವರ ಹೆಸರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಮುಂಚೂಣಿಯಲ್ಲಿತ್ತಾದರೂ ಅಂತಿಮ ಕ್ಷಣದಲ್ಲಿ ಕೈತಪ್ಪಿತ್ತು.
ಮೊಹಮ್ಮದ್ ಅವರ ಮೃತದೇಹವನ್ನು ಬೆಂಗಳೂರಿನಿಂದ ನಗರಕ್ಕೆ ಇಂದು ಸಂಜೆ ತರಲಾಗುತ್ತಿದೆ.