ಕುಂದಾಪುರ: ಬಸ್ಸಿಗೆ ಅಡ್ಡವಾಗಿ ಬಂದ ಕ್ಷುಲ್ಲಕ ಕಾರಣದ ನೆಪವೊಡ್ಡಿ ಬಸ್ಸು ನಿಲ್ಲಿಸಿದ ಬಸ್ಸು ಚಾಲಕ ಲಾರಿ ಚಾಲಕನನ್ನು ಹೊರಗೆಳೆದು ಆತನಿಗೆ ಹಲ್ಲೆ ನಡೆಸಿದ ಘಟನೆ ಕುಂದಾಪುರ ತಾಲೂಕಿನ ಬೊಬ್ಬರ್ಯನಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ.
ಮಂಗಳೂರಿನಿಂದ ಹುಬ್ಬಳ್ಳಿಗೆ ಸರಕು ಸಾಗಿಸುತ್ತಿದ್ದ ಲಾರಿಯ ಚಾಲಕ ರಾಜೇಶ್ ಎಂಬಾತನೇ ಹಲ್ಲೆಗೊಳಗಾದಾತ. ಈತನಿಗೆ ಹಲ್ಲೆ ನಡೆಸಿದ ಬಸ್ಸು ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
(ಹಲ್ಲೆಗೊಳಗಾದ ಲಾರಿ ಚಾಲಕ)
(ಕುಂದಾಪುರ ಟ್ರಾಫಿಕ್ ಪೊಲೀಸರು ಭೇಟಿ)
(ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ಬಸ್ಸು ಚಾಲಕ)
(ಟ್ರಾಫಿಕ್ ಜಾಮ್)
ಉಡುಪಿ ಕಡೆಯಿಂದ ಕುಂದಾಪುರದತ್ತ ಖಾಸಗಿ ಬಸ್ಸು ವೇಗವಾಗಿ ಬರುತ್ತಿದ್ದ ವೇಳೆ ಬೊಬ್ಬರ್ಯನಕಟ್ಟೆ ಸಮೀಪ ಲಾರಿಯೊಂದು ಅಡ್ಡ ಬಂದಿದ್ದಕ್ಕೆ ಆಕ್ರೋಷಗೊಂಡ ಬಸ್ಸು ಚಾಲಕ ಬಸ್ಸನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ ಕೆಳಗಿಳಿದು ಲಾರಿ ಚಾಲಕ ರಾಜೇಶನನ್ನು ಲಾರಿಯಿಂದ ಕೆಳಗಿಳಿಸಿ ಕೆಲವು ಸಾರ್ವಜನಿಕರೆದುರೇ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಲಾರಿ ಚಾಲಕನನ್ನು ಹಲ್ಲೆಯಿಂದ ಪಾರುಗೊಳಿಸಿದ್ದು ಸ್ಥಳೀಯರು ಜಮಾಯಿಸಿ ಬಸ್ಸು ಚಾಲಕನ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ ಹಿನ್ನೆಲೆ ಹಲ್ಲೆ ನಡೆಸಿದ ಬಸ್ಸು ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಅರ್ಧ ತಾಸು ಟ್ರಾಫಿಕ್ ಜಾಮ್: ರಸ್ತೆಯ ಮೇಲೆ ಬಸ್ಸು ನಿಲ್ಲಿಸಿ ಹೈಡ್ರಾಮ ಮಾಡಿದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ತಾಸು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಕುಂದಾಪುರ ಟ್ರಾಫಿಕ್ ಪೊಲೀಸರು ಟ್ರಾಫಿಕ್ ವ್ಯವಸ್ಥೆಯನ್ನು ಸುಗಮಗೊಳಿಸಿ ಬಸ್ಸು ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ ಹಲ್ಲೆಗೊಳಗಾದ ಲಾರಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವು ನಡೆಯಿತು.
ಆದ್ರೇ ಘಟನೆ ಬಗ್ಗೆ ಯಾವುದೇ ದೂರು ಮಾತ್ರ ದಾಖಲಾಗಿಲ್ಲ.